ಕಲಬುರ್ಗಿ: ನಗರದಲ್ಲಿ ಇದೇ 5ರಿಂದ 7ರವರೆಗೆ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನ ₹3 ಕೋಟಿಯ ಚೆಕ್ ಅನ್ನು ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಜು ಲೇಂಗಟಿ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಹಸ್ತಾಂತರಿಸಿದರು.
ಸಮ್ಮೇಳನದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ ಎಂದು ಮುನಿಸಿಕೊಂಡಿದ್ದ ಸಂಘದ ಪದಾಧಿಕಾರಿಗಳು, ವಂತಿಗೆ ನೀಡಲು ಹಿಂದೇಟು ಹಾಕಿದ್ದರು.
ಸಿದ್ಧತೆ ಬಹುತೇಕ ಪೂರ್ಣ:ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನುಡಿ ಜಾತ್ರೆಗಾಗಿ ಭವ್ಯ ವೇದಿಕೆ ಸಿದ್ಧಪಡಿಸಲಾಗಿದ್ದು, ಮೂರು ದಿನಗಳವರೆಗೆ ಸಾಹಿತ್ಯ, ಸಂಸ್ಕೃತಿಯ ಸಂಗಮ ಮೇಳೈಸಲಿದೆ.
ಜಿಲ್ಲೆಯ ಮಳಖೇಡವನ್ನು ರಾಜಧಾನಿಯನ್ನಾಗಿಸಿಕೊಂಡು ಆಳಿದ ರಾಷ್ಟ್ರಕೂಟರ ಕೋಟೆಯನ್ನು ವೇದಿಕೆಗೆ ಹಿನ್ನೆಲೆಯಾಗಿಸಿಕೊಂಡು ನಿರ್ಮಿಸಲಾಗಿದ್ದು, ಆಕರ್ಷಕವಾಗಿದೆ. ವೇದಿಕೆ ಮುಂಭಾಗದಲ್ಲಿ 25 ಸಾವಿರ ಕುರ್ಚಿಗಳನ್ನು ಅಳವಡಿಸುವ ಕಾರ್ಯ ಸೋಮವಾರ ನಡೆದಿತ್ತು. ತಾತ್ಕಾಲಿಕ ಶೌಚಾಲಯಗಳು, ರಸ್ತೆಗಳ ನಿರ್ಮಾಣ, ಸ್ವಾಗತ ಕಮಾನುಗಳ ಅಳವಡಿಕೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಸೋಮವಾರದಿಂದ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಮಂಗಳವಾರ (ಫೆ.4) ಬೆಳಿಗ್ಗೆ ನಗರಕ್ಕೆ ಬರಲಿದ್ದಾರೆ.
ಫೆ 5ರಂದು ಬೆಳಿಗ್ಗೆ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಿ ಅಂದಾಜು 6 ಕಿ.ಮೀ. ಕ್ರಮಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಮುಖ್ಯ ವೇದಿಕೆ ತಲುಪಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಾಹ್ನ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.