ADVERTISEMENT

ಹೆಸರಿಗಷ್ಟೇ ಅಲ್ಲ, ವಾಸ್ತವದಲ್ಲೂ ಕಲ್ಯಾಣ ಕರ್ನಾಟಕ ಆಗಬೇಕು: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 7:20 IST
Last Updated 9 ಜೂನ್ 2020, 7:20 IST
ಕಲ್ಯಾಣ ಕರ್ನಾಟಕ‌ ಮಾನವ ಸಂಪನ್ಮೂಲ‌, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ  ಕಲಬುರಗಿ ವಿಭಾಗದ ನೂತನ ಕಚೇರಿ ಉದ್ಘಾಟನೆಯನ್ನು ವಿಡಿಯೊ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದರು.
ಕಲ್ಯಾಣ ಕರ್ನಾಟಕ‌ ಮಾನವ ಸಂಪನ್ಮೂಲ‌, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಲಬುರಗಿ ವಿಭಾಗದ ನೂತನ ಕಚೇರಿ ಉದ್ಘಾಟನೆಯನ್ನು ವಿಡಿಯೊ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದರು.    

ಬೆಂಗಳೂರು: ಕಲ್ಯಾಣ ಕರ್ನಾಟಕ ಹೆಸರಷ್ಟೇ ಬದಲಾದರೆ ಸಾಲದು, ವಾಸ್ತವವಾಗಿ ಅದು ಜಾರಿಗೆ ಬರಬೇಕು, ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅವರು ಮಂಗಳವಾರ ಇಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ (ರಿ) ಕಲಬುರ್ಗಿ ವಿಭಾಗ ಕಲಬುರ್ಗಿ ಇದರ (ವಿಡಿಯೋ ಮುಖಾಂತರ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅವರ ಸಂದೇಶದ ಪೂರ್ಣ ಪಾಠ:

ADVERTISEMENT

ಅತ್ಯಂತ ಸಂತೋಷದಿಂದ ಇಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿದ್ದೇನೆ.

ಫೆಬ್ರವರಿ 10, 2020 ರಂದು ಹೈದ್ರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಮ್ಮ ಸರ್ಕಾರ ಘೋಷಿಸಿತು. ಕೇವಲ ಹೆಸರಿನಿಂದ ಕಲ್ಯಾಣ ಕರ್ನಾಟಕ ಎಂದು ಕರೆದರೆ ಸಾಲದು, ಈ ಪ್ರದೇಶದ 6 ಜಿಲ್ಲೆಗಳ ನಿಜವಾದ ಅಭಿವೃದ್ಧಿ ಸಾಧಿಸುವ ಮೂಲಕ ಕಲ್ಯಾಣದ ಪರಿಕಲ್ಪನೆ ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿದೆ.

ಈ ಭಾಗದ ಜನರಲ್ಲಿ ಕೌಶಲ ಸುಧಾರಿಸಿ ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಪರಿಣಾಮಕಾರಿ ಬೆಳವಣೆಗೆ ಸಾಧಿಸುವುದು ನಮ್ಮ ಗುರಿ.

'ಕಲ್ಯಾಣ ಕರ್ನಾಟಕ' ಪ್ರಾಂತ್ಯದ ಅಭಿವೃದ್ಧಿಗೆ ಹೊಸ ಆಯಾಮ ನೀಡುವುದು ನಮ್ಮ ಸರ್ಕಾರದ ಗುರಿ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಂಘವು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಕೃಷಿ, ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗ, ಗ್ರಾಮ ಸಬಲೀಕರಣ, ಯುವ ಜನ ಹಾಗೂ ಮಹಿಳಾ ಸಬಲೀಕರಣ ಮತ್ತು ನೈತಿಕ ತತ್ವಗಳನ್ನು ಸಾಧಿಸಿ, ಕಲ್ಯಾಣ ಕರ್ನಾಟಕದ ಜನರ ಬದುಕಿನಲ್ಲಿ ಹೊಸ ಶಕೆಯೊಂದು ಪ್ರಾರಂಭವಾಗಲಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹500 ಕೋಟಿ ಗಳನ್ನು ಆಯವ್ಯಯದಲ್ಲಿ ತೆಗೆದಿರಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಧುರೀಣರು, ಮಾಜಿ ಸಂಸದರು ಡಾ. ಬಸವರಾಜ ಪಾಟೀಲ ಸೇಡಂರವರು ಕ್ರಾಂತಿಕಾರಕ ಬದಲಾವಣೆಗೆ ಮುನ್ನಡಿ ಬರೆಯಲು ಸಮರ್ಥರಿದ್ದಾರೆ. ಯಾವುದೇ ಅಭಿವೃದ್ಧಿ ಜನಕೇಂದ್ರಿತವಾಗಿರಬೇಕು ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಮತ್ತು ಸ್ಥಳೀಯ ಕೌಶಲವನ್ನು ಆಧರಿಸಿ ಉತ್ಪಾದನೆ ಮತ್ತು ಸೇವೆಯನ್ನು ಒದಗಿಸಿಕೊಳ್ಳಬೇಕು.

ಸ್ವಾಲಂಬನೆಯ ಹಾದಿಯಲ್ಲಿ ನೆಚ್ಚಿನ ಪ್ರಧಾನಿ ಮೋದಿಯವರು ಘೋಷಿಸಿರುವ 'ಆತ್ಮ ನಿರ್ಭರ್ ಭಾರತ್' ಅಭಿಯಾನ ಅತ್ಯಂತ ಸೂಕ್ತವಾದುದಾಗಿದೆ. ಸ್ಥಳೀಯ ಅಸ್ಮಿತೆ ಕಾಪಾಡಿಕೊಂಡು ಜಾಗತಿಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಸುಸಂದರ್ಭವನ್ನು ಕೊರೋನೋತ್ತರ ಬೆಳವಣಿಗೆಗಳು ಒದಗಿಸಿ ಕೊಟ್ಟಿವೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಈ ದಿಸೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಿದೆ ಎನ್ನುವುದು ನನ್ನ ನಂಬಿಕೆಯಾಗಿದೆ.

ಸಂಘದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ 3 ಸಾವಿರ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದು ಶ್ಲಾಘನೀಯ. ಸಂಸ್ಥೆಯ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾವಯವ ಕೃಷಿ ಕೇಂದ್ರಗಳ ಸ್ಥಾಪನೆ, ವ್ಯಕ್ತಿತ್ವ ವಿಕಸನಕ್ಕಾಗಿ ವಿಚಾರ ಸಂಕಿರಣ, ಸ್ವಯಂ ಉದ್ಯೋಗ ಹಾಗೂ ಕೌಶಲ ತರಬೇತಿ, ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಿರುವುದು ಸಕಾಲಿಕ.

ಯುವ ಜನ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆಯಲ್ಲದೆ, ಗ್ರಾಮಗಳ ಸಬಲೀಕರಣಕ್ಕಾಗಿ ಆರ್ಥಿಕ ಉತ್ತೇಜನ ನೀಡುವುದರ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ.

ಡಾ. ಬಸವರಾಜ ಪಾಟೀಲ ಸೇಡಂರವರ ಅಧ್ಯಕ್ಷತೆಯಲ್ಲಿ 15 ಜನರ ಆಡಳಿತ ಮಂಡಳಿ ಸದಸ್ಯರ ಸಮಿತಿ ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ನಾನು ನಂಬಿದ್ದೇನೆ.

'ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು' ಎಂಬ ಧ್ಯೇಯವನ್ನು ಎತ್ತಿ ಹಿಡಿದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆ ಕಾರಣೀಭೂತವಾಗಬೇಕೆನ್ನುವುದು ನಮ್ಮೆಲ್ಲರ ಆಶಯ. ಜನ ಕಲ್ಯಾಣಕ್ಕೆ ಈ ಸಂಘ ಕಂಕಣ ತೊಟ್ಟು ಕಲ್ಯಾಣ ಕರ್ನಾಟಕದ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನೂ ಮಾಡುವಂತಾಗಲಿಯೆಂದು ಹಾರೈಸಿ ಶುಭ ಕೋರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.