ADVERTISEMENT

ಅಕಾಡೆಮಿ, ಪ್ರಾಧಿಕಾರ ಅಧ್ಯಕ್ಷರಿಗೆ ಕೊಕ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 20:00 IST
Last Updated 31 ಜುಲೈ 2019, 20:00 IST
   

ಬೆಂಗಳೂರು: ವಿವಿಧ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ನಾಮ ನಿರ್ದೇಶನಗಳನ್ನು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಪಡಿಸಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಾಗೂ ಕುಮಾರಸ್ವಾಮಿ ನೇತೃ ತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಈ ಸಾಂಸ್ಕೃತಿಕ ಸಂಸ್ಥೆ ಗಳ ಪ್ರಮುಖರ ಅವಧಿ ಮುಗಿಯುವ ಮುನ್ನವೇ, ಬಿಜೆಪಿ ಸರ್ಕಾರ ಅಧಿಕಾರ ಮೊಟಕುಗೊಳಿಸಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

ADVERTISEMENT

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹಿಂದಿನ ಸರ್ಕಾರ ನೇಮಿಸಿದ್ದ ಅಧ್ಯಕ್ಷರು ಹಾಗೂ ಸದಸ್ಯರನ್ನು ಹಾಗೇ ಮುಂದುವರೆಸಿತ್ತು. ಆದರೆ, ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಅಧ್ಯಕ್ಷರಿಂದ ರಾಜೀನಾಮೆ ಪಡೆದು, ಆರು ತಿಂಗಳ ಬಳಿಕ ಹೊಸಬರನ್ನು ನೇಮಕ ಮಾಡಿತ್ತು. ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರ ಅವ ಧಿಯು ಸಾಮಾನ್ಯವಾಗಿ 3 ವರ್ಷ. ಆದರೆ, ನಾಮನಿರ್ದೇಶನ ಆದೇಶ ಹೊರಡಿಸು ವಾಗ, ಮುಂದಿನ ಆದೇಶದವರೆಗೆ ಎಂಬ ಒಕ್ಕಣಿಕೆಯೂ ಇರುತ್ತದೆ. ಹೀಗಾಗಿ, ಸರ್ಕಾರ ಸೂಚಿಸಿದಾಗ ಅಧ್ಯಕ್ಷರು, ಸದಸ್ಯರು ಪದತ್ಯಾಗ ಮಾಡಬೇಕಾಗುತ್ತದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ, ಬಯಲಾಟ ಅಕಾಡೆಮಿ ಹಾಗೂ ಲಲಿತಕಲಾ ಅಕಾಡೆಮಿ ಬಿಟ್ಟು ಉಳಿದ ಅಕಾಡೆಮಿ ಹಾಗೂ ಪ್ರಾಧಿ ಕಾರದ ಅಧ್ಯಕ್ಷರು ಅಧಿಕಾರ ಸ್ವೀಕರಿಸಿ ಎರಡು ಹಾಗೂ ಎರಡಕ್ಕಿಂತ ಹೆಚ್ಚು ವರ್ಷವಾಗಿದೆ.

*ಕಲೆಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಅಕಾಡೆಮಿಗಳು ಬೇರೆ ಬೇರೆ ಯೋಜನೆ ಹಾಕಿಕೊಂಡಿದ್ದು, ವಿವಿಧ ಹಂತದಲ್ಲಿದೆ. ಹಾಗಾಗಿ ಸರ್ಕಾರ ಆದೇಶವನ್ನು ಪುನರ್‌ ಪರಿಶೀಲಿಸಲಿ

-ಜೆ. ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ

*ಇದು ಸರಿಯಾದ ಕ್ರಮವಲ್ಲ. ನಾವು ಯಾವುದೇ ಪಕ್ಷಕ್ಕೆ ಸೀಮಿತವಾಗಿರಲಿಲ್ಲ. ಕಲೆಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸುತ್ತಿದ್ದೆವು. ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿತ್ತು
-ಎಂ.ಎ. ಹೆಗಡೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರು

ಕರ್ನಾಟಕ ನಾಟಕ ಅಕಾಡೆಮಿ–ಜೆ. ಲೋಕೇಶ್

ಕರ್ನಾಟಕ ಜಾನಪದ ಅಕಾಡೆಮಿ–ಟಾಕಪ್ಪ ಕಣ್ಣೂರು

ಕರ್ನಾಟಕ ಲಲಿತಕಲಾ ಅಕಾಡೆಮಿ–ಪ್ರೊ.ಎಂ.ಜೆ. ಕಮಲಾಕ್ಷಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ–ಫಯಾಜ್ ಖಾನ್

ಕರ್ನಾಟಕ ಶಿಲ್ಪಕಲಾ ಅಕಾಡೆಮಿ–ರು. ಕಾಳಾಚಾರ್

ಕರ್ನಾಟಕ ಯಕ್ಷಗಾನ ಅಕಾಡೆಮಿ– ಎಂ.ಎ. ಹೆಗಡೆ

ಕರ್ನಾಟಕ ಬಯಲಾಟ ಅಕಾಡೆಮಿ–ಶ್ರೀರಾಮ ಇಟ್ಟಣ್ಣವರ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ–ಎ.ಸಿ. ಭಂಡಾರಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ–ಆರ್.ಪಿ. ನಾಯಕ್‍

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ– ಪೆಮ್ಮಂಡ ಕೆ. ಪೊನ್ನಪ್ಪ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ–ಕರಂಬಾರ್‌ ಮೊಹಮ್ಮದ್‌

ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ–ಪಿ.ಸಿ. ಜಯರಾಮ

ಕನ್ನಡ ಪುಸ್ತಕ ಪ್ರಾಧಿಕಾರ–ವಸುಂಧರಾ ಭೂಪತಿ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ–ಕೆ. ಮರುಳಸಿದ್ದಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.