ಬೆಂಗಳೂರು: ‘ರಾಜ್ಯ ಗ್ರಂಥಾಲಯ ಇಲಾಖೆಯವಾರ್ಷಿಕ ಸಗಟು ಖರೀದಿ ಯೋಜನೆಯಡಿ ಇನ್ನು ಮುಂದೆ 500ಕನ್ನಡ ಪುಸ್ತಕಗಳ ಪ್ರತಿಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದರು.
ನಗರದಲ್ಲಿ ಬುಧವಾರ ನಡೆದ ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಪ್ರಥಮ ಸಭೆಯನ್ನು ಉದ್ಘಾಟಿಸಿ, ಮಾತನಾಡಿದರು. ‘ಬರಹಗಾರರ ಮತ್ತು ಪ್ರಕಾಶಕರ ಸಂಘದ ಕೋರಿಕೆಯಂತೆ ಕನ್ನಡದ ಪುಸ್ತಕಗಳ 300 ಪ್ರತಿಗಳ ಖರೀದಿಯನ್ನು 500 ಪ್ರತಿಗಳಿಗೆ ಹೆಚ್ಚಿಸಲಾಗುವುದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳ ಮಹತ್ವದ ಕುರಿತು ಅರಿವು ಮೂಡಿಸಿ, ಅಧ್ಯಯನದ ಅಭಿರುಚಿ ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಪುಸ್ತಕ ಸಮಿತಿಯು ರೂಪುರೇಷೆ ಸಿದ್ಧಪಡಿಸಬೇಕು’ ಎಂದು ಮನವಿ ಮಾಡಿದರು.
‘ಓದುಗರಿಗೆ ಹೊಸ ಪುಸ್ತಕಗಳು ದೊರೆಯುವಂತಾಗಲು 2018–2019ನೇ ಸಾಲಿನಲ್ಲಿ ಬಾಕಿ ಇರುವ ಅನುದಾನವನ್ನು ಪುಸ್ತಕಗಳ ಖರೀದಿಗೆ ನೀಡಲಾಗುವುದು. ಕೋವಿಡ್ನಿಂದ ಎದುರಾದ ಆರ್ಥಿಕ ಸಂಕಷ್ಟ ಸ್ಥಿತಿಯನ್ನು ಎದುರಿಸಲು ಲೇಖಕ ಮತ್ತು ಪ್ರಕಾಶಕರಿಗೆ ಪ್ರಸಕ್ತ ಸಾಲಿನ ಖರೀದಿ ಬಜೆಟ್ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಾಹಿತಿ ದೊಡ್ಡರಂಗೇಗೌಡರ ನೇತೃತ್ವದ ರಾಜ್ಯ ಪುಸ್ತಕ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಕೆಲಸ ಮಾಡಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.