ಬೆಂಗಳೂರು: ರಾಷ್ಟ್ರಕವಿ ಪುರಸ್ಕಾರ ಆಯ್ಕೆಗೆ ಹೊಸದಾಗಿ ಸಮಿತಿ ರಚಿಸಿ, ಗೌರವಕ್ಕೆ ಅರ್ಹರಾದವರ ಹೆಸರನ್ನು ಘೋಷಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಪತ್ರ ಬರೆದಿದ್ದಾರೆ. ‘ಕೆಲ ವರ್ಷಗಳ ಹಿಂದೆ ಅಂದಿನ ಸರ್ಕಾರ ರಾಷ್ಟ್ರಕವಿ ಗೌರವಕ್ಕೆ ಅರ್ಹರಾದವರ ಹೆಸರನ್ನು ಸೂಚಿಸಲು ಕೋ. ಚೆನ್ನಬಸಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆದರೆ, ಆ ಸಮಿತಿಯು ಯಾರ ಹೆಸರನ್ನು ಸೂಚಿಸಿರಲಿಲ್ಲ. ರಾಷ್ಟ್ರಕವಿ ಗೌರವಕ್ಕೆ ಸೂಕ್ತರಾದವರು ಯಾರೂ ಇಲ್ಲ ಎಂಬ ವರದಿ ನೀಡಿತ್ತು. ಇದು ಸಮಿತಿಗೆ ನೀಡಿದ ಕಾರ್ಯಷರತ್ತಿನ ಉಲ್ಲಂಘನೆಯಾಗಿದೆ. ಈಗ ಹೊಸದಾಗಿ ಸಮಿತಿ ರಚಿಸಿ, ಯೋಗ್ಯರಾದವರ ಹೆಸರನ್ನು ಸೂಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ರಾಷ್ಟ್ರಕವಿ ಗೌರವಕ್ಕೆ ಯೋಗ್ಯರಾದವರು ಕನ್ನಡದಲ್ಲಿ ಬೇಕಾದಷ್ಟು ಸಾಹಿತಿಗಳು ಇದ್ದಾರೆ. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಕವಿ ಪುರಸ್ಕಾರ ನೀಡುವ ಪದ್ಧತಿಯನ್ನು ಮುಂದುವರಿಸಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಈ ಗೌರವವನ್ನು ಯಾರಿಗೆ ನೀಡಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಒಂದೂವರೆ ಸಾವಿರ ವರ್ಷಗಳ ಲಿಖಿತ ಸಾಹಿತ್ಯ ಪರಂಪರೆ ಇತಿಹಾಸವಿರುವ ಇಲ್ಲಿ ರಾಷ್ಟ್ರಕವಿ ಗೌರವಕ್ಕೆ ಅರ್ಹರಾದವರು ಇಲ್ಲ ಎನ್ನುವುದು ಭಾಷೆಗೆ ಮಾಡಿದ ಅವಮಾನ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.