ಬೆಂಗಳೂರು: ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಕಚೇರಿಯನ್ನು ನವೀಕರಣ ಮಾಡಲಾಗಿದೆ.
ಈ ಕಾರ್ಯಕ್ಕೆ ಕರ್ಣಾಟಕ ಬ್ಯಾಂಕ್ ಸಿಎಸ್ಆರ್ ಅಡಿ ₹ 20 ಲಕ್ಷವನ್ನು ನೀಡಿದೆ. ಈ ಹಣದಲ್ಲಿ ಕಚೇರಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಂಪ್ಯೂಟರ್ಗಳು ಹಾಗೂ ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಬ್ಯಾಂಕ್ ಮೊದಲ ಹಂತದಲ್ಲಿ ₹ 17.48 ಲಕ್ಷ ನೀಡಿತ್ತು. ಒಟ್ಟು ₹ 37.48 ಲಕ್ಷವನ್ನು ನೀಡಿದೆ. ಈ ಹಣದಲ್ಲಿ ಪರಿಷತ್ತಿನ ಎರಡನೇ ಮಹಡಿಯನ್ನು ನವೀಕರಣ ಮಾಡಲಾಗಿದೆ.
‘ಕರ್ಣಾಟಕ ಬ್ಯಾಂಕ್ ಪರಿಷತ್ತಿನೊಂದಿಗೆ ಕೈ ಜೋಡಿಸುವ ಮೂಲಕ ಕಟ್ಟಡದ ನವೀಕರಣಕ್ಕೆ ನೆರವಾಗಿದೆ. ಇದರಿಂದಾಗಿ ನಾವು ಬ್ಯಾಂಕ್ಗೆ ಆಭಾರಿಯಾಗಿದ್ದೇವೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ನಾಗರಾಜ್ ಉಪಾಧ್ಯಾಯ, ‘ನಮ್ಮ ಬ್ಯಾಂಕ್ ಪರಿಷತ್ತಿನೊಂದಿಗೆ ನಿರಂತರ ಒಡನಾಟದಲ್ಲಿದ್ದು, ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಅಭ್ಯುದಯಕ್ಕೆ ಕೈ ಜೋಡಿಸುತ್ತ ಬಂದಿದೆ. ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಗಮನಿಸಿ, ನವೀಕರಣಕ್ಕೆ ನೆರವು ನೀಡಿದ್ದೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.