
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲಿ 24 ಮಂದಿಗೆ ವೇತನ ನೀಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಪರಿಷತ್ತಿನಲ್ಲಿ ಒಟ್ಟು 46 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಇಬ್ಬರು ಮಾತ್ರ ಕಾಯಂ ನೌಕರರಾಗಿದ್ದು, ಉಳಿದವರನ್ನು ಕಾಲಕಾಲಕ್ಕೆ ಸಂಚಿತ ವೇತನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಸಂಚಿತ ವೇತನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಕ್ಟೋಬರ್ ತಿಂಗಳಿನಿಂದ ವೇತನ ಪಾವತಿಯಾಗಿರಲಿಲ್ಲ. ಅವರ ವೇತನ ಪಾವತಿಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನಕ್ಕಾಗಿ ಕಸಾಪ ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
24 ಸಿಬ್ಬಂದಿ ವೇತನ ಪಾವತಿಗೆ ಅನುಮೋದನೆ ನೀಡಿರುವ ಆರ್ಥಿಕ ಇಲಾಖೆ, ಉಳಿದ 22 ಸಿಬ್ಬಂದಿಯ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೇಳಿದೆ. ಕಸಾಪದ ಆರ್ಥಿಕ ಸಮಿತಿಯಿಂದಾಗಲಿ, ಕಾರ್ಯಕಾರಿ ಸಮಿತಿಯಿಂದಾಗಲಿ ಅನುಮೋದನೆ ಪಡೆಯದೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ನಿವೃತ್ತಿ ನಂತರವೂ ಕೆಲ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ನೌಕರರ ವೇತನವನ್ನು ಯಾವ ಆಧಾರದ ಮೇಲೆ ನಿಗದಿ ಮಾಡಲಾಗಿದೆ? ಯಾವ ಆಧಾರದ ಮೇಲೆ ಹೆಚ್ಚಿಸಲಾಗಿದೆ ಎಂದು ಇಲಾಖೆ ಪ್ರಶ್ನಿಸಿದೆ.
ಈ ನೇಮಕಾತಿಯಲ್ಲಿ 13 ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಸೇರಿದ್ದಾರೆ. ನೇಮಕಾತಿಗೆ ಸಂಬಂಧಿಸಿದ ಲೋಪಗಳಿಗೆ ಹೊಣೆಗಾರಿಕೆ ನಿರ್ಧರಿಸಿ, ತನಿಖಾ ವರದಿಯ ಅನುಸಾರ ಕ್ರಮಕೈಗೊಳ್ಳಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.