ADVERTISEMENT

ವಿಧಾನಸಭೆ ಕಲಾಪ: ರಾಜ್ಯಪಾಲರ ಪ್ರತಿನಿಧಿಗಳ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 20:00 IST
Last Updated 18 ಜುಲೈ 2019, 20:00 IST
ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಜುಭಾಯಿ ವಾಲಾ    

ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ರಾಜ್ಯಪಾಲರು ರಂಗಪ್ರವೇಶ ಮಾಡಿದ್ದಾರೆ.

ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುವ ಹೊತ್ತಿಗೆ ರಾಜ್ಯಪಾಲರ ಪ್ರತಿನಿಧಿಗಳೂ ಸದನಕ್ಕೆ ಬಂದಿದ್ದು, ನಿಯಮಿತವಾಗಿ ಕಲಾಪದ ವರದಿಯನ್ನು ರವಾನಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಎಲ್ಲ ವಿವರಗಳನ್ನು ದಾಖಲಿಸಿಕೊಂಡರು.ಸದನದಲ್ಲಿ ನಡೆಯುತ್ತಿದ್ದ ಚರ್ಚೆ, ವಿದ್ಯಮಾನಗಳು, ಸಭಾಧ್ಯಕ್ಷರ ನಡೆ, ಮೈತ್ರಿ ಪಕ್ಷಗಳ ಶಾಸಕರ ನಡವಳಿಕೆಗಳನ್ನು ದಾಖಲಿಸಿಕೊಂಡು ವರದಿ ಸಲ್ಲಿಸಿದರು.

ರಾಜಕೀಯ ಬೆಳವಣಿಗೆ, ಮೈತ್ರಿ ಸರ್ಕಾರ ಅಲ್ಪಮತದತ್ತ ಸಾಗಿರುವುದು, ಪ್ರಸ್ತುತ ಸನ್ನಿವೇಶಗಳ ಬಗ್ಗೆ ಕೇಂದ್ರಕ್ಕೆ ರಾಜ್ಯಪಾಲರು ವರದಿ ಸಲ್ಲಿಸುವ ಸಾಧ್ಯತೆಗಳಿವೆ.

ADVERTISEMENT

ಕಾನೂನು ಸಲಹೆ: ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಾಜ್ಯ ಸರ್ಕಾರದ ಅಡ್ವೊಕೇಟ್ಜನರಲ್ ಉದಯ್ ಹೊಳ್ಳ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಸಭಾಧ್ಯಕ್ಷರು ಚರ್ಚಿಸಿದರು. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ರಾಜಕೀಯ ಪಕ್ಷಗಳು ವಿಪ್ ಜಾರಿ ಮಾಡಿದ್ದರೂ ಸದನಕ್ಕೆ ಬಾರದ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ನೀಡಬೇಕು ಎಂದು ಸದನದಲ್ಲಿ ಸದಸ್ಯರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದುಕೊಂಡರು.

*
ನಿಯಮದಂತೆ ಸದನ ನಡೆಸುತ್ತಿದ್ದೇನೆ. ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಳ್ಳಲು ತಯಾರಿಲ್ಲ.
-ಕೆ.ಆರ್.ರಮೇಶ್ ಕುಮಾರ್, ಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.