ADVERTISEMENT

ಸಿಎಂ ಕಳೆದ ಬಜೆಟ್‌ನಲ್ಲಿ ಸುತ್ತಿದ್ದ ಬಂಡಲ್‌ಗಳೇ ಅನುಷ್ಠಾನಗೊಂಡಿಲ್ಲ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2023, 7:13 IST
Last Updated 25 ಜನವರಿ 2023, 7:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರುವರಿ 17ರಂದು ತಮ್ಮ ಎರಡನೇ ಬಜೆಟ್‌ ಮಂಡಿಸುವ ಸಿದ್ಧತೆಯಲ್ಲಿದ್ದಾರೆ. ಆದರೆ, 2022–23ರಲ್ಲಿ ಅವರು ಮಂಡಿಸಿದ ಚೊಚ್ಚಲ ಆಯವ್ಯಯದಲ್ಲಿರುವ 132 ಘೋಷಣೆಗಳು ಇನ್ನೂ ಅನುಷ್ಠಾನಗೊಂಡಿಲ್ಲ.

ಇದೇ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್‌, ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿರುವ ವಿಶೇಷ ವರದಿಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

‘ಬಡಾಯಿ ಬೊಮ್ಮಾಯಿಯವರ ಎರಡನೇ ಬಜೆಟ್ ಸಮೀಪಿಸಿದೆ.‌ ಆದರೆ, ಮೊದಲ ಬಜೆಟ್‌ನಲ್ಲಿ ಸುತ್ತಿದ್ದ ಬಂಡಲ್‌ಗಳೇ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಕಳೆದ ಬಾರಿ ಘೋಷಣೆ ಮಾಡಿದ್ದ ಸುಮಾರು 132 ಯೋಜನೆಗಳನ್ನು ಜಾರಿ ಮಾಡಲು ಬೊಮ್ಮಾಯಿ ಅವರಿಗೆ ಇನ್ನೂ ಧಮ್ಮು– ತಾಕತ್ತು ಬಂದಿಲ್ಲ. ಈ ಘೋಷಣೆಗಳೆಲ್ಲಾ ಕೇವಲ ಪ್ರಚಾರಕ್ಕೆ ಸೀಮಿತವೇ ಮುಖ್ಯಮಂತ್ರಿಗಳೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

‘ವಿವಿಧ ರಾಜ್ಯಗಳಲ್ಲಿ ಕಳಪೆ ಗುಣಮಟ್ಟದ ಕಾರಣಕ್ಕೆ ಕಪ್ಪುಪಟ್ಟಿಯಲ್ಲಿ ಇರುವ ಕಂಪನಿಗೆ ₹25 ಕೋಟಿ ಮೌಲ್ಯದ ಔಷಧಿ ಪೂರೈಸಲು ಟೆಂಡರ್ ನೀಡಲಾಗಿದೆ. ಆರೋಗ್ಯ ಸಚಿವ ಸುಧಾಕರ್ ಅವರೇ, ಜನಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ?, ₹25 ಕೋಟಿಯಲ್ಲಿ ನಿಮ್ಮ ಪರ್ಸೆಂಟ್ ಎಷ್ಟು? ಕಳಪೆ ಗುಣಮಟ್ಟದ ಔಷಧ ಸೇವನೆಯಿಂದ ಆಗುವ ಜೀವಹಾನಿಗೆ ಹೊಣೆ ಯಾರು’ ಎಂದು ಕಾಂಗ್ರೆಸ್ ಟೀಕಿಸಿದೆ.

ಕಳೆದ ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಅವರು, ‘ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಅತೀ ಹೆಚ್ಚು 23 ಸೇರಿದಂತೆ, 34 ಇಲಾಖೆಗಳಲ್ಲಿ ಒಟ್ಟು 391 ಘೋಷಣೆಗಳನ್ನು ನೀಡಿದ್ದರು. ಆ ಪೈಕಿ, 52 ನೀತಿಗೆ ಸಂಬಂಧಿಸಿದ ಹೇಳಿಕೆಗಳು. ಉಳಿದಂತೆ, 330 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆ ಪೈಕಿ, 207 ಅನುಷ್ಠಾನಗೊಂಡಿವೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.