ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ಸಭಾತ್ಯಾಗ: ಮಸೂದೆಗೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 20:13 IST
Last Updated 23 ಮಾರ್ಚ್ 2022, 20:13 IST
ವಿಧಾನ ಪರಿಷತ್‌
ವಿಧಾನ ಪರಿಷತ್‌   

ಬೆಂಗಳೂರು: ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ಸಭಾತ್ಯಾಗದ ಮಧ್ಯೆಯೇ ‘ಕರ್ನಾಟಕ ಬಂದೀಖಾನೆ ಕಾಯ್ದೆ (ತಿದ್ದುಪಡಿ) ಮಸೂದೆ’ ವಿಧಾನ ಪರಿಷತ್‌ನಲ್ಲಿ ಬುಧವಾರ ಅಂಗೀಕಾರಗೊಂಡಿತು.

ಜೈಲುಗಳಲ್ಲಿ ಮೊಬೈಲ್ ಅಥವಾ ಇತರ ಸಂಪರ್ಕ ಸಾಧನಗಳನ್ನು ನಿಷೇಧಿಸುವ ಹಾಗೂ ಪೆರೋಲ್ ಅವಧಿ ಮುಕ್ತಾಯಗೊಂಡ ಬಳಿಕ ಕೈದಿ ಮರಳಿ ಹಾಜರಾಗಲು ತಪ್ಪಿದರೆ ಜಾಮೀನು ನೀಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಈ ಮಸೂದೆ ಅವಕಾಶ ಕಲ್ಪಿಸಲಿದೆ.

ವಿರೋಧ ಪಕ್ಷಗಳ ಸದಸ್ಯರ ಆಕ್ಷೇಪಗಳಿಗೆ ಮತ್ತು ಸಂದೇಹಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು. ಆದರೆ, ‘ಈ ಮಸೂದೆ ಜನವಿರೋಧಿಯಾಗಿದೆ’ ಎಂದು ಆರೋಪಿಸಿ ಸದಸ್ಯರು ಸಭಾತ್ಯಾಗ ಮಾಡಿದರು. ‘ಮಸೂದೆ ಜನವಿರೋಧಿ ಅಲ್ಲ. ಅಪರಾಧಿಗಳ ವಿರೋಧಿ. ವಿರೋಧ ಪಕ್ಷದವರು ಅಪರಾಧಿಗಳ ಪರ ಸಭಾತ್ಯಾಗ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು.

ADVERTISEMENT

‘ಜೈಲಿನ ಒಳಗೆ ಮೊಬೈಲ್‌ ಮತ್ತಿತರ ವಸ್ತುಗಳು ಸಿಗಲು ಅಲ್ಲಿನ ಸಿಬ್ಬಂದಿಯೇ ಕಾರಣ. ಜೈಲುಗಳಲ್ಲಿ ಜಾಮರ್‌ಗಳನ್ನು ಅಳವಡಿಸಬೇಕು. ಪೆರೋಲ್ ಮೇಲೆ ಹೊರಬಂದು ಅವಧಿ ಮುಗಿದ ನಂತರ ಹಾಜರಾಗದ ಕೈದಿಗಳಿಗೆ ಜಾಮೀನು ನೀಡಿದವರನ್ನು ಶಿಕ್ಷೆಗೆ ಗುರಿಪಡಿಸುವುದು ಅಮಾನವೀಯ. ಹೀಗಾದರೆ ಜಾಮೀನು ನೀಡಲು ಯಾರೂ ಮುಂದೆ ಬರುವುದಿಲ್ಲ. ಅಮಾಯಕರಿಗೆ ಅನ್ಯಾಯವಾಗುತ್ತದೆ. ಈ ತಿದ್ದುಪ‍ಡಿ ಕೈಬಿಡಬೇಕು’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಒತ್ತಾಯಿಸಿದರು. ‘ಜೈಲು ಕೈಪಿಡಿಯಲ್ಲಿ ಸುಧಾರಣೆ ತರಬೇಕಿದೆ. ಅಧಿಕಾರಿಗಳು ಸರಿ ಇದ್ದರೆ ತಿದ್ದುಪಡಿ ಅಗತ್ಯವಿಲ್ಲ. ಜೈಲು ಸುಧಾರಣಾ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಅಧಿಕಾರಿಗಳಿಗೆ ದಂಡ ವಿಧಿಸುವ ಅಂಶ
ವನ್ನೂ ಮಸೂದೆಯಲ್ಲಿ ಸೇರಿಸಬೇಕು. ಮಹಿಳಾ ಕೈದಿಗಳಿಗೆ ಪ್ರತ್ಯೇಕ ಜೈಲು‌ ಮಾಡಬೇಕು’ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.