ADVERTISEMENT

ಕೋರ್ಟ್‌ ಮೂಲಸೌಕರ್ಯ ಅಧ್ಯಯನಕ್ಕೆ ಸದನ ಸಮಿತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 21:42 IST
Last Updated 20 ಫೆಬ್ರುವರಿ 2020, 21:42 IST

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಹಂತಗಳ ನ್ಯಾಯಾಲಯಗಳಲ್ಲಿ ಮೂಲಸೌಕರ್ಯದ ಸ್ಥಿತಿಗತಿ ಅರಿತು ವರದಿ ಪಡೆಯಲು ಸದನ ಸಮಿತಿ ರಚಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕಾಂಗ್ರೆಸ್‌ನ ಹಿರಿಯ ಸದಸ್ಯ ಎಚ್‌.ಕೆ.ಪಾಟೀಲ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿ, ನ್ಯಾಯಾಲಯಗಳ ಮೂಲ ಸೌಕರ್ಯದ ಸ್ಥಿತಿಗತಿ ಅರಿತು, ಅವುಗಳನ್ನು ಕಲ್ಪಿಸಲು ಸದನ ಸಮಿತಿ ರಚಿಸಬೇಕು ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು ಭರವಸೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸದನ ಸಮಿತಿಯ ಅಗತ್ಯವಿದೆ, ಈ ಸಂಬಂಧ ಸಚಿವರು ಹೇಳಿಕೆ ನೀಡಬೇಕು’ ಎಂದರು. ಮಾಧುಸ್ವಾಮಿ ಸದನ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಿದರು.

ADVERTISEMENT

ಗಡಿ ವಿಚಾರದಲ್ಲಿ ಕಠಿಣ ನಿರ್ಧಾರ ಬೇಕು: ‘ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಪದೇ ಪದೇ ರಾಜ್ಯವನ್ನು ಕೆಣಕುತ್ತಿದೆ. ಗ್ರಾಮವೊಂದರಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಸರ್ಕಾರ ಹಣ ನೀಡಿದೆ. ಆದರೆ, ಗ್ರಾಮ ಪಂಚಾಯಿತಿ ಸಮಾರಂಭದಲ್ಲಿ ಕನ್ನಡ ಬಾವುಟ ಹಾಕಿಲ್ಲ, ಕನ್ನಡ ಭಾಷೆಯಲ್ಲಿ ಮಾತನಾಡಿಲ್ಲ’ ಎಂದು ಎಚ್‌.ಕೆ. ಪಾಟೀಲ ಹೇಳಿದರು.

‘ವಿವಿಧ ಇಲಾಖೆಗಳಲ್ಲಿ 1.7 ಲಕ್ಷ ಕಡತಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ. ಇವುಗಳನ್ನು ವಿಲೇವಾರಿ ಮಾಡಲು 5 ವರ್ಷಗಳು ಬೇಕಾಗುತ್ತವೆ. ಇವುಗಳ ವಿಲೇವಾರಿಗೆ ಕಡತ ಯಜ್ಞ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.