ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ (ಡಿ.5) ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ರಾಜ್ಯದಾದ್ಯಂತ ಹೋರಾಟ ಯಶಸ್ವಿಗೊಳಿಸಲು ವಾರದಿಂದ ಸಿದ್ಧತೆ ಮಾಡಿಕೊಳ್ಳುತ್ತಿವೆ.
‘ಬಸವ ಕಲ್ಯಾಣ ಉಪಚುನಾವಣೆ ಇರುವುದರಿಂದ ಮರಾಠರನ್ನು ಓಲೈಕೆ ಮಾಡುವ ಉದ್ದೇಶದಿಂದ ರಾಜ್ಯಸರ್ಕಾರ ಮರಾಠ ನಿಗಮ ರಚನೆಗೆ ಮುಂದಾಗಿದ್ದು, ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂಬುದು ಕನ್ನಡಪರ ಸಂಘಟನೆಗಳು ಪ್ರಮುಖ ಆರೋಪ. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಪದೇ ಪದೇ ಬಂದ್ ನಡೆಸುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, 50ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಜೆಡಿಎಸ್, ಕಾಂಗ್ರೆಸ್ನಂತಹ ರಾಜಕೀಯ ಪಕ್ಷಗಳೂ ಬಂದ್ಗೆ ಪರೋಕ್ಷ ಬೆಂಬಲ ನೀಡಿವೆ.
ರಸ್ತೆ ತಡೆ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಬಿಗಿ ಭದ್ರತೆ
ಡಿ.5ರಂದು ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೊ ರೈಲು ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತಿದೆ.
ಏನೇನಿರುತ್ತದೆ ?
ಬೆಂಗಳೂರು ನಗರದಲ್ಲಿ ಬಿಎಂಟಿಸಿ, ಮೆಟ್ರೊ ರೈಲು ಸಂಚಾರ ಎಂದಿನಂತಿರುತ್ತದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಸಂಸ್ಥೆಗಳೂ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೋಟೆಲ್ ಮಾಲೀಕರ ಸಂಘವು ಬಂದ್ಗೆ ನೈತಿಕ ಬೆಂಬಲ ಮಾತ್ರ ನೀಡಿದ್ದು, ಇವುಗಳ ಸೇವೆಯೂ ಎಂದಿನಂತೆ ಇರಲಿದೆ. ಇನ್ನು, ಆರೋಗ್ಯ ಸೇವೆ, ಔಷಧ ಅಂಗಡಿ, ಹಾಲು, ಪತ್ರಿಕೆಗಳು ಲಭ್ಯ ಇರಲಿವೆ.
ಏನೇನಿರುವುದಿಲ್ಲ ?
ಆಟೊ ಚಾಲಕರು–ಮಾಲೀಕರ ಸಂಘ, ಓಲಾ–ಉಬರ್ ಚಾಲಕರ ಸಂಘ ಬಂದ್ಗೆ ಬೆಂಬಲ ನೀಡಿದ್ದು, ಇವುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಬೀದಿ–ಬದಿ ವ್ಯಾಪಾರಸ್ಥರ ಸಂಘವೂ ಬಂದ್ಗೆ ಬೆಂಬಲ ನೀಡಿರುವುದರಿಂದ ತರಕಾರಿ ಮತ್ತಿತರ ಅಗತ್ಯ ವಸ್ತುಗಳು ಸೇವೆ ಸಿಗುವ ಸಾಧ್ಯತೆ ಇಲ್ಲ. ಪ್ರತಿಭಟನೆ ತೀವ್ರಗೊಂಡರೆ ಬಸ್ಗಳ ಸೇವೆಯಲ್ಲಿಯೂ ವ್ಯತ್ಯಯವಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.