ADVERTISEMENT

ಅರುಣ್‌ ಕುಮಾರ್‌ಗೆ ರಾಣೆಬೆನ್ನೂರು ಟಿಕೆಟ್, ಸ್ಫರ್ಧೆ ಖಚಿತ ಎಂದಿದ್ದ ಶಂಕರ್‌

ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:01 IST
Last Updated 1 ಡಿಸೆಂಬರ್ 2019, 13:01 IST
ಆರ್‌.ಶಂಕರ್‌ ಮತ್ತು ಅರುಣ್‌ ಕುಮಾರ್‌ ಪೂಜಾರ್‌
ಆರ್‌.ಶಂಕರ್‌ ಮತ್ತು ಅರುಣ್‌ ಕುಮಾರ್‌ ಪೂಜಾರ್‌    

ಬೆಂಗಳೂರು:ರಾಣೆಬೆನ್ನೂರು ಕ್ಷೇತ್ರದಿಂದ ಅರುಣ್‌ ಕುಮಾರ್‌ ಪೂಜಾರ್‌ಗೆಬಿಜೆಪಿ ಟಿಕೆಟ್‌ ನೀಡಿದ್ದು, ಅವಕಾಶ ಸಿಗುವ ವಿಶ್ವಾಸದಲ್ಲಿದ್ದ ಅನರ್ಹಗೊಂಡಿದ್ದ ಶಾಸಕ ಆರ್‌.ಶಂಕರ್‌ಗೆ ನಿರಾಸೆಯಾಗಿದೆ.

'ಆರ್.ಶಂಕರ್ ಜತೆ ಮಾತುಕತೆ ನಡೆಸಿದ್ದೇನೆ. ಅವರನ್ನು ವಿಧಾನಪರಿಷತ್‌ಗೆಆಯ್ಕೆ ಮಾಡಿ ಸಚಿವ ಸ್ಥಾನ ನೀಡಲಾಗುವುದು. ನನ್ನ ಮಾತಿಗೆ ಶಂಕರ್ ಒಪ್ಪಿಕೊಂಡಿದ್ದಾರೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಅರುಣ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಹೇಳಿದ್ದಾರೆ.

'ರಾಣೆಬೆನ್ನೂರು ಕ್ಷೇತ್ರದಿಂದ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಬಿಜೆಪಿ ಟಿಕೆಟ್ ನೀಡಲೇಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ' ಎಂದು ಅನರ್ಹ ಶಾಸಕ ಆರ್‌.ಶಂಕರ್‌ ಹೇಳಿದ್ದರು.

ನನಗೆ ವಿಧಾನಪರಿಷತ್ ಸದಸ್ಯ ಸ್ಥಾನದ ಅಗತ್ಯವಿಲ್ಲ. ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಸಿಎಂ ಯಡಿಯೂರಪ್ಪ ಅವರ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ಸಿಗಲಿದೆ ಎಂದು ಶಂಕರ್‌ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಶುಕ್ರವಾರ ಅರುಣ್‌ ಕುಮಾರ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ.

ಅರುಣ್‌ ಕುಮಾರ್‌ 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಅವರು 53,780 ಮತಗಳನ್ನು ಪಡೆದಿದ್ದರೆ, ಆರ್‌.ಶಂಕರ್‌46,992 ಹಾಗೂಅರುಣ್ ಕುಮಾರ್ 9,476 ಮತಪಡೆದಿದ್ದರು.

ಶಂಕರ್ ಸ್ಪರ್ಧಿಸಿದರೆ ಗೆಲುವು ಕಷ್ಟಕರ ಎಂದು ಆ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ನೀಡಿದ ವರದಿಯನ್ನು ಆಧರಿಸಿ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆಮಾಡಿ, ಮಂತ್ರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.