ಹಾವೇರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ 1.09 ಕೋಟಿ ಮನೆಗಳ ಸಮೀಕ್ಷೆ (ಶೇ 75.96) ಪೂರ್ಣಗೊಂಡಿದ್ದು, 34.55 ಲಕ್ಷ ಮನೆಗಳ ಸಮೀಕ್ಷೆ ಬಾಕಿ ಇದೆ.
ಸಮೀಕ್ಷೆಗೆ ನಿಗದಿತ ಗುರಿ ಸಾಧನೆಯಲ್ಲಿ ಕೊಪ್ಪಳ ಜಿಲ್ಲೆ (ಶೇ 96.42) ಪ್ರಥಮ ಸ್ಥಾನದಲ್ಲಿದ್ದು, ಹಾವೇರಿ ಜಿಲ್ಲೆ (ಶೇ 95.88) 2ನೇ ಹಾಗೂ ರಾಯಚೂರು ಜಿಲ್ಲೆ (92.71) 3ನೇ ಸ್ಥಾನದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 32.64ರಷ್ಟು ಮಾತ್ರ ಗುರಿ ಸಾಧನೆಯಾಗಿದ್ದು, ಕಡೇ ಸ್ಥಾನದಲ್ಲಿದೆ.
ಭಾನುವಾರ ಸಂಜೆ 6 ಗಂಟೆವರೆಗಿನ ಅಂಕಿ–ಅಂಶದ ಮಾಹಿತಿ ಪ್ರಕಾರ, ಕೊಪ್ಪಳ ಜಿಲ್ಲೆಯ 3.19 ಲಕ್ಷ ಮನೆಗಳ ಪೈಕಿ, 3.07 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಹಾವೇರಿ ಜಿಲ್ಲೆಯ ಜಿಲ್ಲೆಯ 4.12 ಲಕ್ಷಗಳ ಮನೆಗಳ ಪೈಕಿ 3.95 ಲಕ್ಷ ಮನೆಗಳ ಸಮೀಕ್ಷೆ ಮುಕ್ತಾಯಗೊಂಡಿದೆ.
ಸೆ. 22ರಿಂದ ಅಕ್ಟೋಬರ್ 4ರವರೆಗೂ ಸಮೀಕ್ಷೆ ಗುರಿ ಸಾಧನೆಯಲ್ಲಿ ಹಾವೇರಿ ಮೊದಲ ಸ್ಥಾನದಲ್ಲಿತ್ತು. ಭಾನುವಾರ ಅತ್ಯಧಿಕ ಮನೆಗಳ ಸಮೀಕ್ಷೆ ಮಾಡುವ ಮೂಲಕ ಕೊಪ್ಪಳ ಜಿಲ್ಲೆ ಮೊದಲ ಸ್ಥಾನಕ್ಕೆ ಜಿಗಿದಿದೆ. ಅ.7ರವರೆಗೂ ಸಮೀಕ್ಷೆ ನಡೆಸಲು ಅವಕಾಶವಿದ್ದು, ಎರಡೂ ಜಿಲ್ಲೆಗಳಲ್ಲಿ ಸೋಮವಾರವೇ ಸಮೀಕ್ಷೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಸಮೀಕ್ಷೆ ಮುಗಿಸಿದ ಸಾವಿರ ಶಿಕ್ಷಕರು: ಹಾವೇರಿ ಜಿಲ್ಲೆಯಲ್ಲಿ ನಿಯೋಜಿಸಿದ್ದ ಪ್ರಾಥಮಿಕ ಶಾಲೆಗಳ 3,777 ಶಿಕ್ಷಕರ ಪೈಕಿ, ಸಾವಿರ ಶಿಕ್ಷಕರು ತಮಗೆ ನಿಗದಿಪಡಿಸಿದ್ದ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.
‘ಶಿಕ್ಷಕ್ಷರಿಗೆ ತಲಾ 100ರಿಂದ 150 ಮನೆಗಳ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ವಹಿಸಲಾಗಿತ್ತು. ಸೆ. 22ರಿಂದ ಅ. 5ರ ಸಂಜೆ ವೇಳೆಗೆ ಶೇ 95.88ರಷ್ಟು ಸಮೀಕ್ಷೆ ಪೂರ್ಣಗೊಳಿಸಿದ್ದಾರೆ‘ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿದ್ಯುತ್ ಮೀಟರ್ಗಳಿಗೆ ಅಂಟಿಸಿದ್ದ ಸ್ಟಿಕ್ಕರ್ನ ಕ್ಯೂಆರ್ ಕೋಡ್ ಬಳಸಿ ಮನೆಗಳನ್ನು ಗುರುತಿಸಿದ್ದ ಶಿಕ್ಷಕರು, ನಿಗದಿತ 60 ಪ್ರಶ್ನೆಗಳಿಗೂ ಜನರಿಂದ ಉತ್ತರ ಪಡೆದು ಆ್ಯಪ್ನಲ್ಲಿ ನಿಖರವಾಗಿ ದಾಖಲಿಸಿದ್ದಾರೆ. ಆಗಾಗ ತಾಂತ್ರಿಕ ಸಮಸ್ಯೆ ಎದುರಾದರೂ, ತ್ವರಿತವಾಗಿ ಬಗೆಹರಿಸಲಾಗಿದೆ’ ಎಂದು ಹೇಳಿದರು.
‘ನಿತ್ಯ 33,275 ಮನೆಗಳ ಸಮೀಕ್ಷೆ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಅಕ್ಟೋಬರ್ 5ರಂದು ಒಂದೇ ದಿನದಲ್ಲಿ 12,306 ಮನೆಗಳ ಸಮೀಕ್ಷೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.