ಬೆಂಗಳೂರು:‘ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಲ್ಲಿರುವ ಕೆಲವರು ಖಾಲಿ ಇಲ್ಲದ ಕುರ್ಚಿಗೆ ಟವಲ್ ಹಾಕಿದ್ದಾರೆ. ಇವರು ಪಂಕ್ಚರ್ ಆದ ಮತ್ತು ಪೆಟ್ರೋಲ್ ಇಲ್ಲದ ಬಸ್ಸುಗಳನ್ನು ಹತ್ತಿದ್ದಾರೆ. ಆ ಬಸ್ಸು ಹೊರಡುವುದೇ ಇಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ ಮಾರ್ಮಿಕವಾಗಿ ಹೇಳಿದ್ದಾರೆ.
ನಿಮ್ಹಾನ್ಸ್ನಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದ ಅವರು ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಹೊರಡದೇ ಇರುವ ಬಸ್ಸಿನ ಸೀಟಿಗೆ ಟವಲ್ ಹಾಕಿ ಕೂತರೇ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಹಾಗಿದ್ದರೆ ಬಿಜೆಪಿ ಪಂಕ್ಚರ್ ಆಗಿರುವ ಬಸ್ಸೇ ಎಂಬ ಪ್ರಶ್ನೆಗೆ, ‘ಬಿಜೆಪಿ ಪಂಕ್ಚರ್ ಬಸ್ ಅಲ್ಲ, ಮುಖ್ಯಮಂತ್ರಿ ಆಗಲು ಹೊರಟಿರುವವರ ಬಸ್ಸುಗಳ ಸ್ಥಿತಿ ಹೇಳಿದ್ದೇನೆ. ಯಡಿಯೂರಪ್ಪ ನಮ್ಮ ನಾಯಕರು. ಇನ್ನೆರಡೂ ವರ್ಷ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ನಾನು ಮುಖ್ಯಮಂತ್ರಿ ರೇಸ್ನಲ್ಲಿ ಇಲ್ಲ. ರೇಸ್ ಕುದುರೆ ಹಿಂದೆ ಓಡುವ ಜಾಯಮಾನವೂ ನನ್ನದಲ್ಲ’ ಎಂದರು.
‘ಮುಖ್ಯಮಂತ್ರಿಯವರ ಬಸ್ಸು ಚೆನ್ನಾಗಿದೆ, ಅದರ ಕುರ್ಚಿಯೂ ಸರಿ ಇದೆ, ಬಸ್ಸು ಕೂಡ ಸರಿಯಾದ ವೇಗದಲ್ಲಿ ಓಡುತ್ತಿದೆ’ ಎಂದರು.
‘ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಮತ್ತು ಆ ರೇಸ್ನಲ್ಲೂ ನಾನಿಲ್ಲ. ಆದರೆ, ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.
‘ನಮ್ಮ ಪಕ್ಷದ ಚಿಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಕೆ ಬೇಕು? ಅವರಲ್ಲೇ ಸಾಕಷ್ಟು ತಿಕ್ಕಾಟ ನಡೆಯುತ್ತಿದೆ. ಸಿಎಂ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಅವರ ಅಥವಾ ಸಿದ್ದರಾಮಯ್ಯ ಅವರಾ ಎಂಬುದನ್ನು ಬಗೆಹರಿಸಿಕೊಳ್ಳಲಿ ಎಂದು ಅಶೋಕ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.