ಬೆಂಗಳೂರು: ವಸತಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ ₹21,331 ಕೋಟಿ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ. ಇದನ್ನು 'ಡಕೋಟಾ ಸರ್ಕಾರ' ಎನ್ನದೆ ಇನ್ನೇನು ಹೇಳಬೇಕು? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಆರೋಗ್ಯ ಸೇರಿದಂತೆ ರಾಜ್ಯ ಸರ್ಕಾರದ ಐದು ಇಲಾಖೆಗಳು ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ನಲ್ಲಿ ಏಳು ಯೋಜನೆಗಳಿಗೆ ಮೀಸಲಿಟ್ಟಿರುವ ಅನುದಾನದ ಬಳಕೆಯಲ್ಲಿ ಹಿಂದುಳಿದಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ನಿಗದಿಪಡಿಸಿದ್ದ ಗುರಿಗೆ ಹೋಲಿಸಿದರೆ ಒಟ್ಟು ₹ 21,331.65 ಕೋಟಿ ಬಳಕೆಯಾಗದೆ ಉಳಿದಿದೆ.ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳು ಇದನ್ನು ಬಹಿರಂಗಪಡಿಸಿವೆ. ಕೃಷಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಗಳೂ ಈ ಪಟ್ಟಿಯಲ್ಲಿವೆ.
ಈ ಬಗ್ಗೆ ‘ಪ್ರಜಾವಾಣಿ’ ಅ.28ರ ಸಂಚಿಕೆಯಲ್ಲಿ ‘ಬಳಕೆಯೇ ಆಗದ ₹21,331 ಕೋಟಿ’ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ಇದನ್ನೇ ಉಲ್ಲೇಖಿಸಿ ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
‘ಆಂತರಿಕ ಕಿತ್ತಾಟ, ಖಾತೆ ರಂಪಾಟ, ನಾಯಕತ್ವ ಬದಲಾವಣೆ, ಉಪಚುನಾವಣೆಗಳಲ್ಲಿ ಕಾಲ ಕಳೆದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ 'ಶೂನ್ಯ ಸಂಪಾದನೆ' ಮಾಡಿದೆ. ವಸತಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ ₹21,331 ಕೋಟಿ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ. ಇದನ್ನು 'ಡಕೋಟಾ ಸರ್ಕಾರ' ಎನ್ನದೆ ಇನ್ನೇನು ಹೇಳಬೇಕು?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.