ಬೆಂಗಳೂರು: ‘ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆದರೆ ಅರ್ಧ ಸಚಿವ ಸಂಪುಟ ಖಾಲಿಯಾಗಲಿದೆ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಗಂಗಾ ಕಲ್ಯಾಣ ಯೋಜನೆ ಯಲ್ಲಿ 14,537 ಕೊಳವೆ ಬಾವಿ ಮಂಜೂರಾಗಿದ್ದು, ಅದರಲ್ಲಿ ಅವ್ಯವ ಹಾರ ನಡೆದಿದೆ. ಈ ತನಿಖೆಯನ್ನು ಆರ್ಡಿಪಿಆರ್ ಇಲಾಖೆಯ ಎಂಜಿನಿ ಯರ್ಗೆ ವಹಿಸಲಾಗಿದ್ದು, 15 ದಿನಗಳಲ್ಲಿ ವರದಿ ಬರಬೇಕಿತ್ತು. ದೇವರಾಜ ಅರಸು ನಿಗಮದಲ್ಲಿ ಒಂದು ಕೊಳವೆ ಬಾವಿ ಕೊರೆಯಲು ₹ 93 ಲಕ್ಷ ಬಿಲ್ ಮಾಡಲಾಗುತ್ತಿದೆ. ಆದರೆ, ಅಂಬೇಡ್ಕರ್, ಆದಿ ಜಾಂಬವ ನಿಗಮದಲ್ಲಿ ಅದೇ ಕೊಳವೆ ಬಾವಿ ಕೊರೆಯಲು ₹ 1.83 ಲಕ್ಷ ವೆಚ್ಚ ಮಾಡ ಲಾಗುತ್ತಿದೆ’ ಅವರು ದೂರಿದರು.
‘ಗಂಗಾಕಲ್ಯಾಣ ಯೋಜನೆಯಲ್ಲಿ ಸಮಾಜ ಕಲ್ಯಾಣ ಸಚಿವರಿಗೂ ಶೇ 40ರಷ್ಟು ಕಿಕ್ ಬ್ಯಾಕ್ ಹೋಗಿದೆ. ಹಿಂದಿನ ಸಚಿವರು, ಈಗಿನ ಸಚಿವರು ಇಬ್ಬರೂ ಇದರ ಹಿಂದೆ ಇದ್ದಾರೆ’ ಎಂದು ಆರೋಪಿಸಿ ಅವರು, ‘ಈ ಬಗ್ಗೆ ಸರಿಯಾಗಿ ತನಿಖೆ ನಡೆದರೆ ಇನ್ನೂ ಎರಡು ವಿಕೆಟ್ ಬೀಳಲಿದೆ’ ಎಂದರು.
‘545 ಪಿಎಸ್ಐ ಹುದ್ದೆಗೆ ನಡೆದ ನೇಮಕಾತಿ ಪರೀಕ್ಷೆಯಲ್ಲೂ ಅವ್ಯವಹಾರ ಆಗಿದೆ. ಈ ಬಗ್ಗೆ ಅಭ್ಯರ್ಥಿಗಳೇ ದೂರು ನೀಡಿದ್ದಾರೆ. ಬಿಜೆಪಿಯ ಕಾರ್ಯ ದರ್ಶಿಯ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆಯ ಪತ್ರಿಕೆ ಸೋರಿಕೆ ಆಗಿದೆ. ಆದರೆ, ಗೃಹ ಸಚಿವರು ಯಾವುದೇ ಅವ್ಯವಹಾರ ನಡೆದಿಲ್ಲ ಎಂದಿದ್ದಾರೆ. ಒಬ್ಬ ಅಭ್ಯರ್ಥಿಯಿಂದ ₹ 70 ಲಕ್ಷದಿಂದ ₹ 80 ಲಕ್ಷ ಲಂಚ ಪಡೆದು ಆಯ್ಕೆ ಮಾಡಲಾಗಿದೆ. ಅಧಿಕಾರಿಗಳು, ಗೃಹ ಸಚಿವರು ಇದರ ಹಿಂದೆ ಇದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಅವರು
ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.