ಬೆಂಗಳೂರು: ಸ್ವಾತಂತ್ರ್ಯ ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೂಟು ಹಾಕಿಕೊಳ್ಳಲು ಆಧಾರವಾಗಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದಿರುವುದರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಆರಗ ಜ್ಞಾನೇಂದ್ರ ಅವರು ಗಾಂಧಿ ಅವರ ಭಾವಚಿತ್ರದ ಮೇಲೆ ಕೈ ಇಟ್ಟು ಬೂಟು ಹಾಕಿಕೊಳ್ಳುತ್ತಿರುವ ವಿಡಿಯೊ ತುಣುಕನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಗೃಹಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ ಎಂದು ಪ್ರಶ್ನಿಸಿದೆ.
‘ಮಹಾತ್ಮ ಗಾಂಧಿಯವರಿಗೆ ಈ ರೀತಿಯಲ್ಲಿ ಅವಮಾನಿಸುವ ನಿರ್ದೇಶನ ನಾಗಪುರದಿಂದ ಬಂದಿತ್ತೇ ಆರಗ ಜ್ಞಾನೇಂದ್ರ ಅವರೇ? ಕಾನೂನು ಸುವ್ಯವಸ್ಥೆ ನಿರ್ವಹಿಸುವುದನ್ನೂ ತಿಳಿಯದ, ಮಹನೀಯರಿಗೆ ಗೌರವಿಸುವುದನ್ನೂ ಅರಿಯದ ಸಚಿವರು ದೇಶಭಕ್ತಿಯ ಬಗ್ಗೆ ಭಾಷಣ ಬಿಗಿಯುವುದು ಹಾಸ್ಯಾಸ್ಪದ’ #NakliDeshBhakts (ನಕಲಿ ದೇಶಭಕ್ತರು) ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದ್ದರು. ಬಳಿಕ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದರು. ಈ ಸಂದರ್ಭದ ವಿಡಿಯೊ ತುಣುಕನ್ನು ಉಲ್ಲೇಖಿಸಿ ಕಾಂಗ್ರೆಸ್, ಸಚಿವರ ವಿರುದ್ಧ ಕಿಡಿ ಕಾರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.