ಬೆಂಗಳೂರು: ರಾಜ್ಯದ ವಿರುದ್ಧ ದ್ವೇಷ ಸಾಧಿಸುವ ಬದಲು ವಾಜಪೇಯಿ ಹೇಳಿದ್ದ ರಾಜಧರ್ಮದ ಪಾಠವನ್ನು ಪ್ರಧಾನಿ ನರೇಂದ್ರ ಮೋದಿಯವರು ನೆನಪಿಸಿಕೊಳ್ಳಲಿ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಕೇಂದ್ರ ಪುರಸ್ಕೃತ 61 ಯೋಜನೆಗಳಿಗೆ ಅನುದಾನ ಬಿಡುಗಡೆಯಾಗದಿರುವ ಕುರಿತು, ‘ಕೇಂದ್ರ ಅನುದಾನ ಶೂನ್ಯ’ ಎನ್ನುವ ‘ಪ್ರಜಾವಾಣಿ’ಯ ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಹೀಗೆ ಬರೆದುಕೊಂಡಿದೆ.
‘ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಕೇಂದ್ರದ ಅನುದಾನ ನಿಲ್ಲಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆದರಿಕೆ ಹಾಕಿದ್ದರು. ಇಂದು ಅದೇ ಬೆದರಿಕೆಯಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆಯೇ’ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಬಗ್ಗೆ ಕಾಂಗ್ರೆಸ್ ‘ಎಕ್ಸ್’ನಲ್ಲಿ ಹೀಗೆ ಬರೆದುಕೊಂಡಿದೆ.
‘23 ಇಲಾಖೆಗಳ 61 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಈ ಹಿಂದೆ ಜೆ.ಪಿ ನಡ್ಡಾ ಅವರು ಕಾಂಗ್ರೆಸ್ ಗೆದ್ದರೆ ಕೇಂದ್ರದ ಅನುದಾನ ನಿಲ್ಲಲಿದೆ ಎಂದು ಬೆದರಿಕೆ ಹಾಕಿದ್ದರು, ಇಂದು ಅದೇ ಬೆದರಿಕೆಯಂತೆ ನಡೆದುಕೊಳ್ಳುತ್ತಿದೆಯೇ ಕೇಂದ್ರ ಸರ್ಕಾರ?. ಬಿಜೆಪಿಯ 25 ಸಂಸದರ ಕೆಲಸವೇನು? ಕರ್ನಾಟಕಕ್ಕೆ ಆಗುತ್ತಿರುವ ಈ ಅನ್ಯಾಯವನ್ನು ಏಕೆ ಪ್ರಶ್ನಿಸುತ್ತಿಲ್ಲ? ಕರ್ನಾಟಕದ ಮೇಲೆ ಈ ರೀತಿ ದ್ವೇಷ ಸಾಧಿಸುವ ನರೇಂದ್ರ ಮೋದಿಯವರು ವಾಜಪೇಯಿಯವರು ಹೇಳಿದ್ದ ರಾಜಧರ್ಮದ ಪಾಠವನ್ನು ನೆನಪಿಸಿಕೊಳ್ಳಲಿ’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.