ADVERTISEMENT

Karnataka Elections 2023: ಮುಂದಿನ 2 ತಿಂಗಳಲ್ಲಿ ಪ್ರಧಾನಿ 3 ಬಾರಿ ರಾಜ್ಯಕ್ಕೆ

ಮುಂದಿನ ವಿಧಾನಸಭಾ ಚುನಾವಣಾ ತಂತ್ರಗಾರಿಕೆ ಸಚಿವ ಅಮಿತ್‌ ಶಾ ಕೈಗೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 21:15 IST
Last Updated 24 ಅಕ್ಟೋಬರ್ 2022, 21:15 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್‌ನಿಂದ ಡಿಸೆಂಬರ್‌ ಅವಧಿ ಯಲ್ಲಿ ರಾಜ್ಯಕ್ಕೆ ಮೂರು ಬಾರಿ ಭೇಟಿ ನೀಡಲಿದ್ದಾರೆ.

ನವೆಂಬರ್ 11ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ದಲ್ಲಿ ನಾಡಪ್ರಭು ಕೆಂಪೇಗೌಡರ ಬೃಹತ್‌ ಪ್ರತಿಮೆಯನ್ನು ಅನಾವರಣ ಗೊಳಿಸಲಿದ್ದಾರೆ. ಆ ಬಳಿಕ ಡಿಸೆಂಬರ್‌ನಲ್ಲಿ ಕಾರವಾರ ಮತ್ತುಶಿವಮೊಗ್ಗದಲ್ಲಿ ನಡೆಯುವ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲಿದ್ದು, ಬಿಜೆಪಿ ಪರ ಅಲೆ ಎಬ್ಬಿಸುವ ಪ್ರಯತ್ನ ನಡೆ ಸಲಿ ದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮೋದಿಯವರನ್ನು ಕರೆಸಬೇಕು ಎಂಬ ಬೇಡಿಕೆ ಇದೆ. ‘ಸಾಮಾನ್ಯವಾಗಿ ಮೋದಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ. ನಮ್ಮ ಭಾಗಕ್ಕೆ ಬಂದಿಲ್ಲ. ಆದ್ದರಿಂದ ಚುನಾವಣೆಗೂ ಮುನ್ನ ಕಾರವಾರಕ್ಕೆ ಭೇಟಿ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ, ಅವರು ಬರುವ ಸಾಧ್ಯತೆ ಇದೆ’ ಎಂದು ಕಾರವಾರದ ಬಿಜೆಪಿ ಮೂಲಗಳು ಹೇಳಿವೆ.

ADVERTISEMENT

ಚುನಾವಣಾ ತಂತ್ರಗಾರಿಕೆ ಶಾ ಕೈಗೆ: ‘ಗೃಹ ಸಚಿವ ಅಮಿತ್‌ ಶಾ ಅವರು ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ ವಿಧಾನಸಭಾ ಚುನಾವಣೆಯಬಳಿಕ ಕರ್ನಾಟಕದ ಚುನಾವಣೆಯತ್ತ ಚಿತ್ತ ಹರಿಸಲಿದ್ದಾರೆ. ಇಲ್ಲಿನ ಚುನಾವಣೆಯ ತಂತ್ರಗಳನ್ನು ಅವರೇ ರೂಪಿಸುವುದರ ಜತೆಗೆ, ಚುಕ್ಕಾಣಿಯನ್ನೂ ಅವರೇ ನೋಡಿಕೊಳ್ಳಲಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಸದ್ಯಕ್ಕೆ ಎರಡು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಬಾಕಿ ಉಳಿದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದಾರೆ.

‘ಇದಕ್ಕೂ ಮುಂಚೆ 10 ವಿಭಾಗಗಳಿಗೆ ಒಬ್ಬರಂತೆ ಕೇಂದ್ರ ಸಚಿವರು ಅಥವಾ ನೆರೆಯ ರಾಜ್ಯಗಳಲ್ಲಿರುವ ಪಕ್ಷದ ಪ್ರಮುಖ ನಾಯಕರನ್ನು ಉಸ್ತುವಾರಿ ಗಳನ್ನಾಗಿ ನೇಮಿಸಲಾಗುವುದು. ಇವರು ತಮ್ಮ ವಿಭಾಗಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಇವರು ನವೆಂಬರ್‌ನಿಂದಲೇ ಬೂತ್‌ ಮಟ್ಟದಿಂದ ಕಾರ್ಯ ನಿರ್ವಹಿಸುವುದರ ಜತೆಗೆ ಮಿಷನ್‌ 150 ಗುರಿ ಮುಟ್ಟಲು ಶ್ರಮಿಸಲಿದ್ದಾರೆ’ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದರು.

ಶೇ 40ರಷ್ಟು ಹೊಸಬರಿಗೆ ಟಿಕೆಟ್‌?

ಜನಸಂಕಲ್ಪಯಾತ್ರೆ ಮತ್ತು ವಿವಿಧ ಮೋರ್ಚಾಗಳ ಸಮಾವೇಶ ಡಿಸೆಂಬರ್ 24ಕ್ಕೆ ಮುಗಿಯಲಿದ್ದು, ಆ ಬಳಿಕ ಪೇಜ್‌ ಪ್ರಮುಖ್‌ ಮಟ್ಟದ ಕಾರ್ಯಕರ್ತರನ್ನು ಚುನಾವಣೆಗೆ ಸನ್ನದ್ಧ ಗೊಳಿಸುವ ಕಾರ್ಯಕ್ಕೆ ವರಿಷ್ಠರು ಕೈ ಹಾಕಲಿದ್ದಾರೆ. ನಂತರ ಪಕ್ಷ ಚುನಾವಣೆಗೆ ಇನ್ನಷ್ಟು ಆಕ್ರಮಣಕಾರಿಯಾಗಿ ಹೆಜ್ಜೆ ಇಡಲಿದೆ. ಚುನಾವಣೆಯಲ್ಲಿ ಶೇ 40ರಷ್ಟು ಹೊಸಬರಿಗೆ ಟಿಕೆಟ್‌ ಕೊಡುವ ಸಾಧ್ಯತೆ ಇದೆ. ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡುವವರಿಗೆ ಆದ್ಯತೆ ನೀಡ ಲಾಗು ವುದು. ಭ್ರಷ್ಟಾಚಾರದಿಂದ ಹೆಸರು ಕೆಡಿಸಿ ಕೊಂಡವರಿಗೆ ಮಣೆ ಹಾಕುವುದಿಲ್ಲ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.