ADVERTISEMENT

ಇನಿಂಗ್ಸ್‌ ಮುನ್ನಡೆಗೆ ಕರ್ನಾಟಕದ ಹೋರಾಟ

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 18:39 IST
Last Updated 6 ಜನವರಿ 2020, 18:39 IST
ಎಸ್.ಎಸ್. ಸಾತೇರಿ
ಎಸ್.ಎಸ್. ಸಾತೇರಿ   

ಬೆಳಗಾವಿ: ಕುಂದಾನಗರಿಯ ಪ್ರತಿಭೆ ಎಸ್.ಎಸ್. ಸಾತೇರಿ ಅರ್ಧಶತಕದ (69; 146ಎ, 9ಬೌಂ) ನೆರವಿನಿಂದ ಕರ್ನಾಟಕ ತಂಡವು, 23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡದ ವಿರುದ್ಧ ಇನಿಂಗ್ಸ್‌ ಮುನ್ನಡೆ ಪಡೆಯಲು ಹೋರಾಡುತ್ತಿದೆ.

ಇಲ್ಲಿನ ಕೆ.ಎಸ್‌.ಸಿ.ಎ. ಮೈದಾನದಲ್ಲಿ ಸೋಮವಾರ ನಡೆದ 2ನೇ ದಿನದಾಟದಲ್ಲಿ ಕರ್ನಾಟಕ, ಮೊದಲ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 238 ರನ್‌ ಗಳಿಸಿದೆ. ಆಂಧ್ರ ತಂಡ ಪ್ರಥಮ ಇನಿಂಗ್ಸ್ ನಲ್ಲಿ 281 ರನ್‌ ಗಳಿಸಿತ್ತು. ಇನಿಂಗ್ಸ್ ಮುನ್ನಡೆಗೆ 43 ರನ್‌ಗಳು ಬೇಕಾಗಿವೆ.

ಮೊದಲ ದಿನವಾದ ಭಾನುವಾರ ಕರ್ನಾಟಕ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 13 ರನ್ ಗಳಿಸಿತ್ತು.

ADVERTISEMENT

ಉತ್ತಮ ಪ್ರದರ್ಶನ ನೀಡಿದ ವೈಶಾಕ್‌ ವಿಜಯಕುಮಾರ್‌ (ಬ್ಯಾಟಿಂಗ್ 40) ಹಾಗೂ ಅಬ್ದುಲ್‌ ಹಸನ್ ಖಾಲಿದ್ (ಬ್ಯಾಟಿಂಗ್‌ 32) ಮುನ್ನಡೆ ತಂದುಕೊಡುವ ಭರವಸೆ ಮೂಡಿಸಿದ್ದಾರೆ.

ರಾಜ್ಯ ತಂಡ 27 ಓವರ್‌ನಲ್ಲಿ 74 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ನಡುವೆಯೂ, ತಾಳ್ಮೆಯ ಆಟವಾಡಿದ ಆರಂಭಿಕ ಬ್ಯಾಟ್ಸ್‌ಮನ್‌ ಅಂಕಿತ್ ಉಡುಪ (40; 130ಎ, 7ಬೌಂ) ಆಸರೆಯಾದರು. ಬಳಿಕ ಸಾತೇರಿ ಆ ಸ್ಥಾನ ತುಂಬಿದರು. ಬಳಿಕ ಬಂದ ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿಯ‌ ಮೊತ್ತ ಮುಟ್ಟಲು ಸಾಧ್ಯವಾಗಲಿಲ್ಲ. ನಂತರ ಸಾತೇರಿ–ಅಬ್ದುಲ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು.

ಆಂಧ್ರದ ಪಿ.ಪಿ. ಮನೋಹರ್‌ 3, ಎ. ಪ್ರಣಯ್‌ಕುಮಾರ್‌ ಹಾಗೂ ಗಿರಿನಾಥ್‌ ರೆಡ್ಡಿ ತಲಾ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್: ಆಂಧ್ರಪ್ರದೇಶ ಮೊದಲ ಇನಿಂಗ್ಸ್‌ 281.

ಕರ್ನಾಟಕ 88 ಓವರ್‌ಗಳಲ್ಲಿ 8ಕ್ಕೆ 238 (ಎಸ್.ಎಸ್. ಸಾತೇರಿ 69, ಅಂಕಿತ್ ಉಡುಪ 40, ವೈಶಾಕ್‌ ವಿಜಯಕುಮಾರ್‌ ಬ್ಯಾಟಿಂಗ್ 40, ಅಬ್ದುಲ್‌ ಹಸನ್ ಖಾಲಿದ್ ಬ್ಯಾಟಿಂಗ್ 32; ಪಿ.ಪಿ. ಮನೋಹರ್‌ 47ಕ್ಕೆ 3, ಎ. ಪ್ರಣಯ್‌ಕುಮಾರ್‌ 39ಕ್ಕೆ 2, ಗಿರಿನಾಥ್‌ ರೆಡ್ಡಿ 47ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.