
ಬೆಂಗಳೂರು: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಶಿಬಿರದಲ್ಲಿ (ಆರ್ಡಿಸಿ -2026) ಕರ್ನಾಟಕ– ಗೋವಾ ಎನ್ಸಿಸಿ ನಿರ್ದೇಶನಾಲಯವು ಸತತ 2ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪ್ರಧಾನಮಂತ್ರಿ ಬ್ಯಾನರ್ ಮತ್ತು ಟ್ರೋಫಿ ಪಡೆದಿದೆ.
ಸ್ಪರ್ಧೆಯಲ್ಲಿ ದೇಶದ 17 ನಿರ್ದೇಶನಾಲಯಗಳು ಭಾಗವಹಿಸಿದ್ದವು. ಅತ್ಯುತ್ತಮ ಪಥಸಂಚಲನ, ಫೈರಿಂಗ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಪ್ರಶಸ್ತಿಗೆ ಭಾಜನವಾಯಿತು.
ವರ್ಷವಿಡೀ ಎನ್ಸಿಸಿ ಚಟುವಟಿಕೆಗಳಲ್ಲಿ ಬಹುವಿಧದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ನಿರ್ದೇಶನಾಲಯಕ್ಕೆ ರಕ್ಷಣಾ ಸಚಿವಾಲಯದಿಂದ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿ ನೀಡಲಾಗುತ್ತದೆ.
ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವು ಅಂತರ ನಿರ್ದೇಶನಾಲಯ ಶೂಟಿಂಗ್ ಚಾಂಪಿಯನ್ ಶಿಪ್, ವಾಯುಪಡೆ ಸೈನಿಕ ಶಿಬಿರ, ನೌಕಾಪಡೆ ಸೈನಿಕ ಶಿಬಿರ, ಐಡಿಯಾ ಮತ್ತು ಇನೋವೇಷನ್ ಸ್ಪರ್ಧೆ ಮತ್ತು ಆರ್ಡಿಸಿ -2026 ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತವಾಗಿ ಮೊದಲ ಸ್ಥಾನ ಗಳಿಸುತ್ತಾ ಬಂದಿದೆ.
ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಗಳ ಬ್ಯಾನರ್ ಪ್ರಶಸ್ತಿಯನ್ನು ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಎಸ್.ಬಿ. ಅರುಣ್ ಕುಮಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.