ADVERTISEMENT

ಸಂಗಮ ಬಳಿ ಮೇಕೆದಾಟು ಅಣೆಕಟ್ಟೆ: 5,173 ಹೆಕ್ಟೇರ್‌ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 15:40 IST
Last Updated 9 ಫೆಬ್ರುವರಿ 2026, 15:40 IST
<div class="paragraphs"><p>ಮೇಕೆದಾಟು ಪ್ರದೇಶ</p></div>

ಮೇಕೆದಾಟು ಪ್ರದೇಶ

   

ನವದೆಹಲಿ: ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದ ಕೆಳಭಾಗದಿಂದ ಸುಮಾರು 2 ಕಿ.ಮೀ ದೂರದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. 

ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಕಾವೇರಿ ನೀರಾವರಿ ನಿಗಮ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಕೇಂದ್ರ ಜಲ ಆಯೋಗ ಪರಿಶೀಲನೆ ನಡೆಸಬೇಕಿದೆ. ಈ ಯೋಜನೆಯಿಂದಾಗಿ 5,173 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದೆ.

ADVERTISEMENT

ಯೋಜನೆ ಅನುಷ್ಠಾನಕ್ಕಾಗಿ ಭಾರಿ ಪ್ರಮಾಣದ ಅರಣ್ಯ ಬಳಕೆಗಾಗಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದಿಂದ ಅನುಮತಿ ಪಡೆಯಬೇಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸೋಮವಾರ (ಫೆ.2) ಸವಿಸ್ತಾರವಾದ ವಿವರಣೆ ನೀಡಿರುವ ನಿಗಮದ ಮುಖ್ಯ ಎಂಜಿನಿಯರ್‌, ‘ಹಲವಾರು ಅಧ್ಯಯನಗಳನ್ನು ನಡೆಸಿದ ಬಳಿಕ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅಣೆಕಟ್ಟೆ ನಿರ್ಮಾಣದ ಜಾಗವನ್ನು ಅಂತಿಮಗೊಳಿಸಲಾಗಿದೆ‘ ಎಂದು ತಿಳಿಸಿದ್ದಾರೆ. 

‘ಅಣೆಕಟ್ಟಿನ ಎತ್ತರ 99 ಮೀಟರ್ ಇರಲಿದೆ. ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿರುವ ಪ್ರಸ್ತುತ ಸ್ಥಳದ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ಯಾವುದೇ ನೀರಿನ ಸಂಗ್ರಹಣಾ ಸ್ಥಳ (ಜಲಾಶಯ) ಇಲ್ಲ. ಹೀಗಾಗಿ, ಈ ಜಲಾಶಯದಲ್ಲಿ 67.16 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು. ಈ ಅಣೆಕಟ್ಟೆಯು ಮಳೆಗಾಲದಲ್ಲಿ ವನ್ಯಜೀವಿಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಉಪಯುಕ್ತ ಆಗಲಿದೆ‘ ಎಂದು ಅವರು ಪ್ರತಿ‍‍ಪಾದಿಸಿದ್ದಾರೆ. 

2011ರ ಜನಗಣತಿಯ ಪ್ರಕಾರ 1,91,976 ಚದರ ಕಿ.ಮೀ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಕರ್ನಾಟಕ ರಾಜ್ಯವು ದೇಶದ ಎಂಟನೇ ಅತಿದೊಡ್ಡ ರಾಜ್ಯ. ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ 13 ನದಿಗಳ ಜೊತೆಗೆ ಕೃಷ್ಣಾ ಮತ್ತು ಕಾವೇರಿಯಂತಹ ಪ್ರಮುಖ ನದಿಗಳಿವೆ. ಆದರೂ, ತೀವ್ರ ಬರ, ಕುಡಿಯುವ ನೀರಿನ ಅಭಾವ ಮತ್ತು ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ರಾಜಸ್ಥಾನದ ನಂತರ ಹೆಚ್ಚು ಬರಪೀಡಿತ ‍ಪ್ರದೇಶಗಳು ಇರುವುದು ಕರ್ನಾಟಕದಲ್ಲೇ. ಹೀಗಾಗಿ, ಮೇಕೆದಾಟು ಅಣೆಕಟ್ಟೆ ನಿರ್ಮಿಸುವುದು ಇಂದಿನ ತುರ್ತು ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.