ADVERTISEMENT

ಕೃಷಿ ಭೂಮಿ ಪರಿವರ್ತನೆ ಸಲೀಸು: ಕ್ರಮಕ್ಕೆ 30 ದಿನಗಳ ಗಡುವು

ಇಲ್ಲದಿದ್ದರೆ ಸ್ವಯಂ ಚಾಲಿತವಾಗಿ ಪರಿವರ್ತನೆ

ರಾಜೇಶ್ ರೈ ಚಟ್ಲ
Published 24 ಡಿಸೆಂಬರ್ 2025, 16:42 IST
Last Updated 24 ಡಿಸೆಂಬರ್ 2025, 16:42 IST
   

ಬೆಂಗಳೂರು: ಮಾಸ್ಟರ್ ಪ್ಲಾನ್‌ ಹೊರತಾದ, ಪರಿಭಾವಿತ (ಡೀಮ್ಡ್) ಭೂ ಪರಿವರ್ತನೆಗೂ 30 ದಿನಗಳ ಗಡುವು ನಿಗದಿ ಮಾಡಲಾಗಿದ್ದು, ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ-1964ಕ್ಕೆ ಕಳೆದ ಮೂರು ವರ್ಷಗಳಲ್ಲಿ ತರಲಾದ ತಿದ್ದುಪಡಿಗಳ ಅನ್ವಯ ಹೊಸ ನಿಯಮಗಳನ್ನು ರಚಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಹೊಸ ನಿಯಮಗಳ ಪ್ರಕಾರ, ಕೃಷಿ ಭೂಮಿ ಖರೀದಿ ಸರಳೀಕರಣ ಮತ್ತು ಕೆಲವು ಉದ್ದೇಶಗಳಿಗೆ ಭೂಮಿ ಪರಿವರ್ತನೆ ನಿಯಮ ಸಡಿಲಿಸಲಾಗಿದೆ. ⁠ಭೂ ಪರಿವರ್ತನೆಗೆ ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಅರ್ಜಿಗಳಿಗೆ ಆಯಾ ಜಿಲ್ಲೆಯ ⁠ಜಿಲ್ಲಾಧಿಕಾರಿಗಳು 30 ದಿನಗಳ ಒಳಗಾಗಿ ಅನುಮತಿ ನೀಡಬೇಕು. ದಾಖಲೆಗಳು ಸರಿ ಇಲ್ಲದಿದ್ದರೆ ಸಕಾರಣ ನೀಡಿ, ಅರ್ಜಿಗಳನ್ನು ತಿರಸ್ಕರಿಸಬಹುದು. ನಿಗದಿತ ಅವಧಿಯ ಒಳಗೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳದಿದ್ದರೆ ಸ್ವಯಂ ಚಾಲಿತವಾಗಿ ಭೂ ಪರಿವರ್ತನೆಯಾ ಗುತ್ತದೆ. ಮಾಸ್ಟರ್ ಪ್ಲಾನ್ ಇರುವ ಜಮೀನುಗಳಿಗೂ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದ್ದು, ಅಂಥವರು ನೇರವಾಗಿ ಯೋಜನಾ ಅನುಮೋದನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ADVERTISEMENT

ನವೀಕರಿಸಬಹುದಾದ ಇಂಧನದ ಯೋಜನಾ ಘಟಕ ಸ್ಥಾಪನೆಗೆ ಭೂ ಪರಿವರ್ತನೆಯಿಂದ ವಿನಾಯಿತಿ ಪಡೆಯಬೇಕಾದರೆ ಇಂಧನ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಹೊಸ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಆಶಯದಿಂದ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಭೂಪರಿವರ್ತನೆ ಇಲ್ಲದೇ ಕೈಗಾರಿಕಾ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ.

ಕಂದಾಯ ನ್ಯಾಯಾಲಯಗಳನ್ನು ನಡೆಸುವ ಕುರಿತು ಸ್ಪಷ್ಟ ನಿಯಮ ರೂಪಿಸಲಾಗಿದೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶಗಳನ್ನು ಹೊರಡಿಸದಂತೆ, ಕಾನೂನು ಮೀರಿ ಆದೇಶಗಳನ್ನು ನೀಡದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಹೊಸ ಸುಧಾರಣೆಗಳಿಂದಾಗಿ ಸಾರ್ವಜನಿಕರು ಕಚೇರಿಗಳಿಗೆ ಅನಗತ್ಯವಾಗಿ ಅಲೆಯುವುದು ತಪ್ಪಲಿದೆ.

ಪ್ರಮುಖ ನಿಯಮಗಳು

l ಎಲ್ಲ ಜಮೀನುಗಳ ಪರಿವರ್ತನೆಗಳ ಸರಳೀಕರಣ

l ಆನ್‌ಲೈನ್‌ ಮೂಲಕ ಕಂದಾಯ ನ್ಯಾಯಾಲಯಗಳ ಕಾರ್ಯನಿರ್ವಹಣೆ

l ಆನ್‌ಲೈನ್‌ ಮೂಲಕವೇ ಕಲಾಪದಲ್ಲಿ ಭಾಗವಹಿಸಲು ಜನರಿಗೆ ಅವಕಾಶ

lಕಂದಾಯ ವಿವಾದದ ತೀರ್ಪುಗಳ ಡಿಜಿಟಲ್‌ ಆದೇಶ ಕಡ್ಡಾಯ

l ಸಣ್ಣ ಕೈಗಾರಿಕೆಗಳ ಸ್ಥಾಪನೆಗೂ (ಎರಡು ಎಕರೆ) ಭೂ ಪರಿವರ್ತನೆ ವಿನಾಯಿತಿ

l ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಭೂ ಪರಿವರ್ತನೆ ಬೇಕಿಲ್ಲ 

l ಭೂ ಸುರಕ್ಷಾ ಮೋಜಣಿಗೂ ಕಾನೂನಿನ ಬಲ 

ಫೆಬ್ರುವರಿಗೆ 1.10 ಲಕ್ಷ ಹಕ್ಕು ಪತ್ರ

ತಾಂಡಾ, ಹಟ್ಟಿ, ಗೊಲ್ಲರಹಟ್ಟಿಗಳಲ್ಲಿ ವಾಸಿಸುತ್ತಿರುವ ಜನರಿಗೆ 2026ನೇ ಫೆಬ್ರುವರಿಯಲ್ಲಿ 1.10 ಲಕ್ಷ ಹಕ್ಕುಪತ್ರಗಳನ್ನು
ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಗಳ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, 2017ರಲ್ಲಿ ಕಂದಾಯ ಗ್ರಾಮ ಕಾನೂನಿಗೆ ತಿದ್ದುಪಡಿ ತಂದ ನಂತರ ಆರು ವರ್ಷಗಳಲ್ಲಿ 1.08 ಲಕ್ಷ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. 2023ರಿಂದ 2025ರ ವರೆಗೆ 1.11 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿದೆ ಎಂದರು.

ದಾಖಲೆ ರಹಿತ ವಸತಿ ಪ್ರದೇಶ ಮತ್ತು ಮನೆಗಳನ್ನು ಗುರುತಿಸಲಾಗಿದೆ. ಸರ್ವೇ ಕಾರ್ಯ ಪೂರ್ಣಗೊಳಿಸಿ, ದಾಖಲೆಗಳನ್ನು ತಯಾರಿಸಲಾಗಿದೆ. ಹಕ್ಕುಪತ್ರ ನೀಡಿ, ಕ್ರಯಪತ್ರದಂತೆ ನೋಂದಣಿ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಯಲ್ಲಿ ಪಕ್ಕಾ ಖಾತೆ ಮಾಡುವುದರ ಮುಖಾಂತರ ಸಂಪೂರ್ಣ ಮಾಲೀಕತ್ವ ನೀಡಲಾಗಿದೆ. ಅರ್ಜಿ ಸಲ್ಲಿಕೆಗೂ ಕಾಯದೆ ಕಂದಾಯ ಇಲಾಖೆಯ ಅಧಿಕಾರಿಗಳೇ ಸ್ವತಃ ಜನರ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಿ, ಹಕ್ಕುಪತ್ರ
ಸಿದ್ಧಪಡಿಸಿದ್ದಾರೆ ಎಂದು ಶ್ಲಾಘಿಸಿದರು.

ಕಾಯ್ದೆ ಜಾರಿಯಾದ ಬಳಿಕ ಸಮಗ್ರ ತಿದ್ದುಪಡಿ ತಂದಿರುವುದು ಇದೇ ಮೊದಲು. ಹೊಸ ನಿಯಮಗಳು ಆಡಳಿತ ಸರಳೀಕರಣಕ್ಕೆ ದಾರಿ ಮಾಡಿಕೊಡಲಿವೆ
ಕೃಷ್ಣ ಬೈರೇಗೌಡ,ಕಂದಾಯ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.