ADVERTISEMENT

ಕರಾವಳಿ, ಮಲೆನಾಡು, ‘ಕಲ್ಯಾಣ’ದಲ್ಲಿ ಮಳೆ: ಸೇತುವೆಗಳು ಜಲಾವೃತ, ಸಂಚಾರ ಅಸ್ತವ್ಯಸ್ಥ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 15:37 IST
Last Updated 28 ಆಗಸ್ಟ್ 2025, 15:37 IST
ಮಳೆಯಿಂದಾಗಿ ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ಚಿಮ್ಮೆಗಾಂವ್‌–ಚಿರ್ಕಿ ತಾಂಡಾ ನಡುವೆ ಸಂಪರ್ಕಕಲ್ಪಿಸುವ ಸೇತುವೆ ಗುರುವಾರ ಕೊಚ್ಚಿ ಹೋಗಿದೆ
ಮಳೆಯಿಂದಾಗಿ ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ಚಿಮ್ಮೆಗಾಂವ್‌–ಚಿರ್ಕಿ ತಾಂಡಾ ನಡುವೆ ಸಂಪರ್ಕಕಲ್ಪಿಸುವ ಸೇತುವೆ ಗುರುವಾರ ಕೊಚ್ಚಿ ಹೋಗಿದೆ   

ಬೆಂಗಳೂರು/ಕಲಬುರಗಿ: ಮಂಗಳೂರು, ಉಡುಪಿ, ಕೊಡಗು ಮತ್ತು ಕಲಬುರಗಿ, ಬೀದರ್‌, ಯಾದಗಿರಿ ಕೊಪ್ಪಳ ಜಿಲ್ಲೆಗಳಾದ್ಯಂತ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಭಾರಿ ಮಳೆಯಾಗಿದೆ.

ಮಳೆ ಸುರಿದ ಪರಿಣಾಮ ಹಲವು ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಬೀದರ್‌ನ ಐತಿಹಾಸಿಕ ಬಹಮನಿ ಕೋಟೆಯ ಒಂದು ಭಾಗ ಕುಸಿದಿದೆ. ಬೀದರ್ ಜಿಲ್ಲೆಯಲ್ಲಿ 20 ಸೇತುವೆಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಮಧ್ಯ ರೈಲ್ವೆಯು, ಬೀದರ್‌–ಕಲಬುರಗಿ, ಕಲಬುರಗಿ–ಬೀದರ್‌ ನಡುವಿನ ಡೆಮು ರೈಲಿನ ಸಂಚಾರವನ್ನು ಶುಕ್ರವಾರ (ಆ.29) ರದ್ದುಗೊಳಿಸಿದೆ. 

‌ಕಲಬುರಗಿ ಜಿಲ್ಲೆ ಜೇವರ್ಗಿಯ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಕಚೇರಿ ಹಾಗೂ ಬಡಾವಣೆಗಳಿಗೆ ನೀರು ನುಗ್ಗಿದೆ. ಹಳ್ಳದ ಪ್ರವಾಹದಿಂದ ಜೇವರ್ಗಿ–ಗೌನಳ್ಳಿ ಗ್ರಾಮಕ್ಕೆ ತೆರಳುವ ಸೇತುವೆ ಮುಳುಗಡೆಯಾಗಿ ಸಂಚಾರ ಬಂದ್ ಆಗಿದೆ. ಜೇವರ್ಗಿ ತಾಲ್ಲೂಕಿನಲ್ಲಿ 21 ಮನೆಗಳು ಕುಸಿದು ಬಿದ್ದಿವೆ. ಆಂದೋಲಾ ಗ್ರಾಮದಲ್ಲಿ ಮಳೆಗೆ 21 ಕುರಿಗಳು ಸಾವನಪ್ಪಿವೆ.

ADVERTISEMENT

ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು‌ ಗ್ರಾಮ ಪಂಚಾಯಿತಿ ಕಚೇರಿಗೆ ಮಳೆ ನೀರು ನುಗ್ಗಿದ್ದರಿಂದ ಯಂತ್ರೋಪಕರಣ, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ದಾಖಲೆಪತ್ರಗಳು ಹಾಳಾಗಿವೆ.

ಮೈಸೂರು ವರದಿ: ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ವಿರಾಜಪೇಟೆಯಲ್ಲಿ ಗುರುವಾರವೂ ಭಾರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಸಂಪಾಜೆ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಮಡಿಕೇರಿ–ವಿರಾಜಪೇಟೆ ಸಂಪರ್ಕ ಕಲ್ಪಿಸುವ ಶಕ್ತಿನಗರ ಬಳಿ ರಸ್ತೆಬದಿಯಲ್ಲಿ ಮಣ್ಣು ಕುಸಿದಿದೆ.  

ಹುಬ್ಬಳ್ಳಿ ವರದಿ: ‌ವಿಜಯಪುರ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾದ ಕಾರಣ, ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನ ಕಾಮನಕೇರಿ ಗ್ರಾಮಗಳಲ್ಲಿ ಮನೆಗಳು ಕುಸಿದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಮೂಕಿಹಾಳ ಬಳಿಯ ಸೇತುವೆ ಮುಳುಗಿದ್ದು, ತಾಳಿಕೋಟೆಯಿಂದ ಹಡಗಿನಾಳ ಮಾರ್ಗ ಬಂದ್ ಆಗಿದೆ.

ಮಂಗಳೂರು ವರದಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನದ ನಂತರ ಮಳೆ ಬಿರುಸು ಪಡೆದುಕೊಂಡಿತ್ತು. ಜಿಲ್ಲೆಯ ಮೂಡಿಗೆರೆ, ಆಲ್ದೂರು, ಕೊಟ್ಟಿಗೆಹಾರ, ಕೊಪ್ಪ, ಕಳಸ, ನರಸಿಂಹರಾಜಪುರ, ತರೀಕೆರೆ ಭಾಗದಲ್ಲಿ ಧಾರಾಕಾರವಾಗಿ ಸುರಿದಿದೆ.  

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಸಂಟ್ಯಾರು-ಪಾಣಾಜೆ ರಸ್ತೆಯ ಕೈಕಾರದಲ್ಲಿ ರಸ್ತೆ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮಂಗಳೂರು ನಗರದ ರಾಜಕಾಲುವೆಗಳು ಉಕ್ಕಿ ಹರಿದಿದ್ದು ಚರಂಡಿ ನೀರು ರಸ್ತೆಯ ಮೇಲೆ ಹರಿದು ಹಲವು ಕಡೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಉಡುಪಿ ಜಿಲ್ಲೆಯ ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಬ್ರಹ್ಮಾವರ, ಕಾರ್ಕಳದಲ್ಲಿ ನಿರಂತರ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.