ADVERTISEMENT

ಕೋವಿಡ್ ಲಸಿಕೆ: ರಾಜ್ಯದ ಮನವಿಗೆ ಕೇಂದ್ರ ಸ್ಪಂದಿಸುವ ನಿರೀಕ್ಷೆ ಇದೆ – ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:45 IST
Last Updated 16 ಜುಲೈ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೇಂದ್ರ ಸರ್ಕಾರವು ರಾಜ್ಯದ ಮನವಿ ಪುರಸ್ಕರಿಸಿ, ಜುಲೈ ಹಾಗೂ ಆಗಸ್ಟ್‌ನಲ್ಲಿ ಎರಡನೇ ಡೋಸ್‌ ಪಡೆಯಬೇಕಾಗಿರುವವರಿಗೆ ಅಗತ್ಯವಿರುವಷ್ಟು ಲಸಿಕೆ ಪೂರೈಸುವ ನಿರೀಕ್ಷೆ ಇದೆ’ ಎಂದು ಹೈಕೋರ್ಟ್‌ ಆಶಾವಾದ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ‘ರಾಜ್ಯದಲ್ಲಿ ಎರಡನೇ ಡೋಸ್‌ ತೆಗೆದುಕೊಳ್ಳುವವರಿಗೆ ಅಗತ್ಯವಿರುವ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಯ ಅಭಾವ ಉಂಟಾಗಬಹುದು ಎಂಬುದುಸರ್ಕಾರದ ಅಂಕಿ ಅಂಶಗಳಿಂದ ಮನದಟ್ಟಾಗುತ್ತದೆ’ ಎಂದು ಹೇಳಿತು.

‘ಕೋವಿಶೀಲ್ಡ್‌ ಲಸಿಕೆಯ ಕನಿಷ್ಠ 30 ಲಕ್ಷ ಡೋಸ್‌ಗಳನ್ನು ಪೂರೈಸಿದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ಎಲ್ಲರಿಗೂ ಎರಡನೇ ಡೋಸ್‌ ಲಸಿಕೆ ಹಾಕಬಹುದು ಎಂದು ನಾವು ಈ ತಿಂಗಳ 13ರಂದೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಒಟ್ಟು 60.87 ಲಕ್ಷ ಮಂದಿಗೆ ಕೋವಿಶೀಲ್ಡ್‌ ಲಸಿಕೆಯ ಎರಡನೇ ಡೋಸ್‌ ನೀಡಬೇಕಿದೆ. ಆಗಸ್ಟ್‌ 4ರ ವೇಳೆಗೆ ರಾಜ್ಯಕ್ಕೆ 41.35 ಲಕ್ಷ ಡೋಸ್‌ ಲಸಿಕೆ ಲಭ್ಯವಾಗಲಿದೆ. ಇದನ್ನು ಮೊದಲ ಡೋಸ್‌ ಪಡೆಯುವವರಿಗಾಗಿ ಬಳಸಬೇಕಾಗುತ್ತದೆ. ನಿಗದಿತ ಅವಧಿಯಲ್ಲಿ ಒಟ್ಟು 9.83 ಲಕ್ಷ ಜನರಿಗೆ ಕೋವ್ಯಾಕ್ಸಿನ್‌ನ ಎರಡನೇ ಡೋಸ್‌ ನೀಡಬೇಕು. ಆದರೆ ನಮ್ಮಲ್ಲಿ ಕೇವಲ 7.65 ಲಕ್ಷ ಡೋಸ್‌ ಲಸಿಕೆ ಇದೆ. ಇದನ್ನು ಆಗಸ್ಟ್‌ 3ರವರೆಗೂ ವಿತರಿಸಬಹುದು’ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿತು.

ADVERTISEMENT

‘ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದ ಆಮ್ಲಜನಕ ದುರಂತದಲ್ಲಿ ಮೃತಪಟ್ಟ 13 ಮಂದಿ ಕೊರೊನಾ ಸೋಂಕಿತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ’ ಎಂದು ಸರ್ಕಾರ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.