ಬೆಂಗಳೂರು: ‘ವಿಮಾ ಪಾಲಿಸಿಗಳ ಪರಿಹಾರ ಮೊತ್ತ ಪಡೆಯಲು ಮೃತರ ಉತ್ತರಾಧಿಕಾರಿಗಳು ಮನವಿ ಸಲ್ಲಿಸಿದ ಪಕ್ಷದಲ್ಲಿ ವಿಮೆಗೆ ನಾಮನಿರ್ದೇಶಿತರಾದವರಿಗೆ (ನಾಮಿನಿ) ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಇರುವುದಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮ ಮಗನ ವಿಮೆಗೆ ನಾಮನಿರ್ದೇಶಿತರಾಗಿದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಯಲ್ಲಾಪುರ ನಿವಾಸಿ ನೀಲವ್ವ (61) ಸಲ್ಲಿಸಿದ್ದ ಅರ್ಜಿ (ಆರ್ಎಫ್ಎ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಇತ್ತೀಚೆಗೆ ಆದೇಶಿಸಿದೆ.
‘ನಾಮ ನಿರ್ದೇಶನಗಳನ್ನು ನಿಯಂತ್ರಿಸುವ ವಿಮಾ ಕಾಯ್ದೆ–1938ರ ಕಲಂ 39, ವೈಯಕ್ತಿಕ ಉತ್ತರಾಧಿಕಾರ ಕಾನೂನಾದ ಹಿಂದೂ ಉತ್ತರಾಧಿಕಾರ ಕಾಯ್ದೆ–1956 ಅನ್ನು ಅತಿಕ್ರಮಣ ಮಾಡುವುದಿಲ್ಲ. ಹೀಗಾಗಿ, ವಿಮೆಯಿಂದ ಇರುವ ಪರಿಹಾರ ಪ್ರಯೋಜನಗಳನ್ನು ನಾಮ ನಿರ್ದೇಶಿತರೊಂದಿಗೆ ಕಾನೂನು ಬದ್ಧ ಉತ್ತರಾಧಿಕಾರಿಗಳೂ ಪಡೆಯುವ ಹಕ್ಕು ಹೊಂದಿರುತ್ತಾರೆ’ ಎಂದು ನ್ಯಾಯಪೀಠ ಹೇಳಿದೆ.
‘ಕಾನೂನು ಬದ್ಧ ಉತ್ತರಾಧಿಕಾರಿಗಳು ವಿಮೆಯ ಪರಿಹಾರಕ್ಕಾಗಿ ಮನವಿ ಸಲ್ಲಿಸದಿದ್ದರೆ ಮಾತ್ರ ನಾಮನಿರ್ದೇಶಿತರು ವಿಮೆಯ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾರೆ. ಅರ್ಜಿ ಸಲ್ಲಿಸಿದಲ್ಲಿ ನಾಮ ನಿರ್ದೇಶಿತರಿಗೆ ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಇರುವುದಿಲ್ಲ. ಆದ್ದರಿಂದ, ಒಂದು ವೇಳೆ ಕಾನೂನುಬದ್ಧ ಉತ್ತರಾಧಿಕಾರಿಗಳು ಮನವಿ ಮಾಡಿದಲ್ಲಿ ನಾಮ ನಿರ್ದೇಶಿತರ ಹಕ್ಕು ಉತ್ತರಾಧಿಕಾರಿಗಳ ಹಕ್ಕನ್ನು ನಿಯಂತ್ರಿಸುವುದಿಲ್ಲ. ಯಾವುದೇ ವ್ಯಕ್ತಿಯ ವಿಮೆಗೆ ತಾಯಿಯನ್ನು ನಾಮ ನಿರ್ದೇಶನ ಮಾಡಿ ಮೃತ ಪಟ್ಟಲ್ಲಿ, ಮೃತರ ಪತ್ನಿ, ಮಗು ಮತ್ತು ತಾಯಿ ಪರಿಹಾರವನ್ನು ಮೂರನೇ ಒಂದು ಭಾಗದಂತೆ ಹಂಚಿಕೊಳ್ಳಬೇಕು’ ಎಂದು ನ್ಯಾಯಪೀಠ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.