ADVERTISEMENT

ವಿಚಾರಣೆಗೆ ಹಾಜರು: ಕೈದಿಗಳ ಬಗ್ಗೆ ವಿವರ ಸಲ್ಲಿಕೆಗೆ ಡಿಐಜಿಗೆ ಹೈಕೋರ್ಟ್‌ ಆದೇಶ‍

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 15:29 IST
Last Updated 21 ಫೆಬ್ರುವರಿ 2026, 15:29 IST
<div class="paragraphs"><p>ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ</p></div>

ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ

   

ಬೆಂಗಳೂರು: ‘ರಾಜ್ಯದಾದ್ಯಂತ ಜೈಲುಗಳಲ್ಲಿರುವ ವಿಚಾರಣಾ ಕೈದಿಗಳಲ್ಲಿ ಕಳೆದ ಆರು ತಿಂಗಳಿನಿಂದ ಈತನಕ ಎಷ್ಟು ಜನರನ್ನು ಅವರ ಮುದ್ದತಿನ ದಿನದಂದು ನಿಯಮಿತವಾಗಿ ಖುದ್ದು ಅಥವಾ ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್‌ ವಿಚಾರಣೆಗೆ ಹಾಜರುಪಡಿಸಲಾಗಿದೆ ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌, ರಾಜ್ಯ ಕಾರಾಗೃಹಗಳ ಡಿಐಜಿಗೆ ಖಡಕ್ ತಾಕೀತು ಮಾಡಿದೆ.

ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿ ಇಮ್ರಾನ್‌ ಅಲಿಯಾಸ್ ಕುಳ್ಳನನ್ನು ವಿಚಾರಣೆಗೆ ಹಾಜರುಪಡಿಸದೆ ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆಯ ಪ್ರಕರಣವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.

ADVERTISEMENT

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿರುವ ಲೋಪಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಒಬ್ಬ ವಿಚಾರಣಾ ಕೈದಿಗೆ ನಾಲ್ಕು ವರ್ಷಗಳಲ್ಲಿ 20 ಬಾರಿ ಮುದ್ದತು ನೀಡಿದ್ದರೂ ಕೋರ್ಟ್‌ಗೆ ಹಾಜರುಪಡಿಸಿಲ್ಲ ಎಂದರೆ ಏನರ್ಥ? ಒಬ್ಬ ಸಾಮಾನ್ಯ ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಹೈಕೋರ್ಟ್‌ ಆದೇಶಿಸಬೇಕೆ? ಜೈಲಿನ ಈ ನಡೆಯಿಂದ ನ್ಯಾಯಾಂಗದ ಸಮಯ ವ್ಯರ್ಥವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಒಂದೇ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಕೈದಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂಬುದನ್ನು ವಿವೇಚಿಸದೆ ಬಾಡಿ ವಾರಂಟ್‌ ಪೆಂಡಿಂಗ್‌ ಇರುವಾಗ ಜಾಮೀನು ರಹಿತ ವಾರಂಟ್‌ ಜಾರಿಗೆ ಹೆಣಗಾಡಿರುವುಕ್ಕೆ ಏನು ಹೇಳಬೇಕು? ಆರೋಪಿ ಸಿಕ್ಕಿಲ್ಲ ಎಂದು ಬರೆದಿಟ್ಟಿರುವ ಮಹಾಶಯ ಎಚ್‌ಎಲ್‌ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಪೆಬಲ್‌ ಮುತ್ತಣ್ಣ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು’ ಎಂದು ಆದೇಶಿಸಿತು.

’ಕೈದಿಗಳೂ ಕೂಡಾ ನಮ್ಮಂತೆಯೇ ಮನುಷ್ಯರು. ಅವರ ಬಗ್ಗೆಯೂ ನಮಗೆ ಮಾನವತೆಯ ಅನುಕಂಪ ಇರಬೇಕು. ಶ್ಯೂರಿಟಿ ಕೊಟ್ಟಿಲ್ಲ ಎಂದು ಕೈದಿಯನ್ನು ಅಲ್ಲೇ ಕೊಳೆಯುವಂತೆ ಮಾಡುವುದು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾದ ನಡೆ. ಇನ್ನು ಮುಂದೆ ಹೀಗಾಗಬಾರದು. ಜೈಲಿನ ನಿಯಮಗಳೆಲ್ಲವೂ ಕ್ರಮಬದ್ಧವಾಗಿರಬೇಕು‘ ಎಂದು ಡಿಐಜಿ ಅವರಿಗೆ ಖಡಕ್‌ ನಿರ್ದೇಶನ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು. ಕಾರಾಗೃಹ ಇಲಾಖೆಯ ಡಿಐಜಿ ದಿವ್ಯಶ್ರೀ ಮತ್ತು ವೈಟ್‌ಫೀಲ್ಡ್‌ ಡಿಸಿಪಿ ಸೈದುಲ್ಲಾ ಅಡಾವತ್‌ ವಿಚಾರಣೆ ವೇಳೆ ಖುದ್ದು ಹಾಜರಿದ್ದರು.

=====

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.