ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಶುಕ್ರವಾರ ಪ್ರಕಟಿಸಿದರು.
ಎಂಜಿನಿಯರಿಂಗ್ನಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜಿನ ಎಂ. ರಕ್ಷಿತ್ ಮೊದಲ ರ್ಯಾಂಕ್ ಪಡೆದಿದ್ದಾರೆ ಎಂದು ಅವರು ಘೋಷಿಸಿದರು.
ಹಲವು ಸವಾಲುಗಳ ನಡುವೆಯೂ ಸಿಇಟಿ ನಡೆದಿದೆ. ಕೊರೊನಾ ಸೋಂಕಿತರು, ಕಂಟೈನ್ಮೆಂಟ್ ವಲಯದಲ್ಲಿದ್ದವರು ಕೂಡ ಪರೀಕ್ಷೆ ಪಡೆದಿದ್ದಾರೆ. 63 ವಿದ್ಯಾರ್ಥಿಗಳು ಸೋಂಕಿತರಾಗಿದ್ದರು. ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಪರೀಕ್ಷೆ ಬರೆಸಲಾಯಿತು. ಸವಾಲುಗಳ ನಡುವೆಯೂ ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಪಡೆದಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಮೊದಲು 53 ಕಡೆ ಪರೀಕ್ಷೆ ನಡೆಯುತ್ತಿತ್ತು. ಈ ಬಾರಿ 127 ಸ್ಥಳಗಳಲ್ಲಿ, 497 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಅತಿ ವೇಗದಲ್ಲಿ ಫಲಿತಾಂಶ ನೀಡಿದ್ದೇವೆ. ಪರೀಕ್ಷೆ ಮುಗಿದು 21ನೆ ದಿನಕ್ಕೇ ಫಲಿತಾಂಶ ನೀಡಿದ್ದೇವೆ. ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ 1,94,419 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. 1,75,349 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 1,53,470 ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ರ್ಯಾಂಕಿಂಗ್ ನೀಡಲಾಗಿದೆ ಎಂದರು.
ಕೃಷಿ ಕೋರ್ಸ್ 1,27,626 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗಿದೆ. ಪಶುವೈದ್ಯಕೀಯ 1,29,666 ವಿದ್ಯಾರ್ಥಿಗಳಿಗೆ, ಯೋಗ ಮತ್ತು ನ್ಯಾಚುರೋಪಥಿಗೆ 1,29,611 ಮತ್ತು ಬಿ.ಫಾರ್ಮಾ ಮತ್ತು ಡಿ.ಫಾರ್ಮಾ ಕೋರ್ಸ್ಗೆ 1,55,552 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
88,029 ವಿದ್ಯಾರ್ಥಿಗಳು, 87,320 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ರಸಾಯನವಿಜ್ಞಾನದಲ್ಲಿ ಮೂವರು, ಜೀವವಿಜ್ಞಾನದಲ್ಲಿ 80 ವಿದ್ಯಾರ್ಥಿಗಳು 60ಕ್ಕೆ 60 ಅಂಕಗಳನ್ನು ತೆಗೆದಿದ್ದಾರೆ.
ಆನ್ಲೈನ್ ತರಬೇತಿಯನ್ನು ನೀಡಿದ್ದೆವು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಇದನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಂಡರು ಎಂದು ಹೇಳಿದರು.
http://kea.kar.nic.in, http://cet.kar.nic.in ಮತ್ತು http://karresult.nic.in ಜಾಲಾತಾಣದಲ್ಲಿಫಲಿತಾಂಶ ಲಭ್ಯವಾಗಲಿದೆ.
ಸಿಇಟಿ–2020: ಮೊದಲ ಮೂರು ರ್ಯಾಂಕ್ ಪಡೆದವರು
ಎಂಜಿನಿಯರಿಂಗ್:1. ಎಂ. ರಕ್ಷಿತ್, ಆರ್.ವಿ. ಪಿಯು ಕಾಲೇಜು, ಬೆಂಗಳೂರು, 2. ಆರ್. ಶುಭನ್–ಶ್ರೀ ಚೈತನ್ಯ ಇ–ಟೆಕ್ನೊ ಸ್ಕೂಲ್, ಬೆಂಗಳೂರು, 3. ಎಂ. ಶಶಾಂಕ್ ಬಾಲಾಜಿ, ಬೇಸ್ ಪಿಯು ಕಾಲೇಜು, ಬೆಂಗಳೂರು
ಬಿಎಸ್ಸಿ, ಕೃಷಿ:1.ಎ.ಬಿ. ವರುಣ್ಗೌಡ, ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು 2. ಕೆ. ಸಂಜನಾ– ಬೇಸ್ ಪಿಯು ಕಾಲೇಜು, ಮೈಸೂರು, 3. ಲೋಕೇಶ್ ಬಿ. ಜೋಗಿ– ಶ್ರೀರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು
ಪಶುವೈದ್ಯಕೀಯ:1. ಪಿ. ಸಾಯಿ ವಿವೇಕ್– ನಾರಾಯಣ ಇ–ಟೆಕ್ನೊ ಸ್ಕೂಲ್, ಬೆಂಗಳೂರು, 2. ಆರ್ಯನ್ ಮಹಾಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಸ್ಕೂಲ್ ರಾಜಸ್ಥಾನದಕೋಟಾ,3. ಕೆ. ಸಂಜನಾ– ಬೇಸ್ ಪಿಯು ಕಾಲೇಜು, ಮೈಸೂರು
ಬಿ. ಫಾರ್ಮಾ, ಡಿ.ಫಾರ್ಮಾ:1. ಪಿ. ಸಾಯಿ ವಿವೇಕ್– ನಾರಾಯಣ ಇ–ಟೆಕ್ನೊ ಸ್ಕೂಲ್, ಬೆಂಗಳೂರು, 2. ಸಂದೀಪನ್ ನಾಸ್ಕರ್– ಹೊರರಾಜ್ಯದ ವಿದ್ಯಾರ್ಥಿ, 3. ಪವನ್ ಎಸ್. ಗೌಡ–ನಾರಾಯಣ ಪಿಯು ಕಾಲೇಜು, ಬೆಂಗಳೂರು.
ಯೋಗವಿಜ್ಞಾನ ಮತ್ತು ನ್ಯಾಚುರೋಪಥಿ: 1. ಪಿ.ಪಿ. ಆರ್ನವ್ ಅಯ್ಯಪ್ಪ– ಆಳ್ವಾಸ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ. 2. ಕೆ. ಸಂಜನಾ– ಬೇಸ್ ಪಿಯು ಕಾಲೇಜು, ಮೈಸೂರು, 3. ಪಿ. ಸಾಯಿ ವಿವೇಕ್– ನಾರಾಯಣ ಇ–ಟೆಕ್ನೊ ಸ್ಕೂಲ್, ಬೆಂಗಳೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.