ಬೆಂಗಳೂರು: ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರನ್ನು ಕಾಂಗ್ರೆಸ್ನ ಸಚೇತಕ ನಾರಾಯಣಸ್ವಾಮಿ ಕೈಹಿಡಿದು ದರದರನೇ ಎಳೆದಾಗ ಆಯತಪ್ಪಿ ಮಕಾಡೆ ಬೀಳುವ ಹಂತದಲ್ಲಿ ಅವರನ್ನು ತಬ್ಬಿ ಹಿಡಿದು ರಕ್ಷಿಸಿದ್ದು ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ.
ಈ ವಿಡಿಯೊ ದೃಶ್ಯಾವಳಿ ರಾಷ್ಟ್ರಮಟ್ಟದಲ್ಲಿ ಟ್ರೋಲ್ ಆಗಿದೆ.
ತಮ್ಮನ್ನು ಎಲ್ಲ ಕಡೆಗಳಿಂದಲೂ ಸದಸ್ಯರು ಮುತ್ತಿಕೊಂಡಾಗ ಧರ್ಮೇಗೌಡರು ಅಸಹಾಯಕರಾಗಿ ಕುಳಿತಿದ್ದರು. ಆಗ ನಾರಾಯಣಸ್ವಾಮಿ ಅವರು ಧರ್ಮೇಗೌಡರ ತೋಳನ್ನು ಹಿಡಿದು ಬಲ ಹಾಕಿ ರಭಸದಿಂದ ಎಳೆದರು. ಧರ್ಮೇಗೌಡ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೂ ಬಿಡದ ನಾರಾಯಣಸ್ವಾಮಿ, ಪೀಠದಿಂದ ಆಚೆ ಎಳೆದು ದೂಡಿದರು. ಆಗ ಆಯತಪ್ಪಿ ಬೀಳುತ್ತಿದ್ದ ಧರ್ಮೇಗೌಡರನ್ನು ಶ್ರೀಕಂಠೇಗೌಡ ಅವರು ಗಟ್ಟಿಯಾಗಿ ಅಪ್ಪಿಕೊಂಡು ರಕ್ಷಿಸಿದರು.
ಇದರಿಂದ ತೀವ್ರ ಆಘಾತಕ್ಕೆ ಒಳಗಾದ ಧರ್ಮೇಗೌಡ ಕುಸಿದರು. ಬಳಿಕ ಅವರನ್ನು ಸದಸ್ಯರು ಕೂರುವ ಆಸನದಲ್ಲಿ ಕೂರಿಸಲಾಯಿತು.
ಒಂದು ವೇಳೆ ಅವರು ಆಯತಪ್ಪಿ ಮಕಾಡೆ ಬಿದ್ದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತಿತ್ತು.
ಕೆಲ ದಿನಗಳ ಹಿಂದಷ್ಟೇ ಧರ್ಮೇಗೌಡ ಅವರು ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಕೊರೊನಾ ಸೋಂಕಿಗೂ ಒಳಗಾಗಿ ಚೇತರಿಸಿಕೊಂಡು ಬಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.