ಬೆಂಗಳೂರು: ಕರ್ನಾಟಕ –ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ರಾಜ್ಯ ಬಿಜೆಪಿಯ 25 ಸಂಸದರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಗಡಿ ವಿಚಾರಕ್ಕೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಹಾರಾಷ್ಟ್ರ ಸಂಸದರು ಕೇಂದ್ರ ಗೃಹ ಸಚಿವರನ್ನು ಭೇಟಿಯಾದರೂ ಕರ್ನಾಟಕದ ಬಿಜೆಪಿ ಸಂಸದರಿಗೆ ಇನ್ನೂ ಎಚ್ಚರವಾಗಿಲ್ಲ. ಅಮಿತ್ ಶಾ ಎದುರು ಹೋಗಲು ನಡುಕ ಹುಟ್ಟುತ್ತದೆಯೇ, ಚಳಿ ಜ್ವರ ಬರುತ್ತದೆಯೇ?, ಬಿಜೆಪಿಗರ ದಮ್ಮು ತಾಕತ್ತು ಎಲ್ಲಾ ಮೈಕ್ ಮುಂದೆ ಮಾತ್ರವೇ’ ಎಂದು ಪ್ರಶ್ನಿಸಿದೆ.
‘ಮಹಾರಾಷ್ಟ್ರ ಬಿಜೆಪಿಗೂ ಕರ್ನಾಟಕದ ಬಿಜೆಪಿಗೂ ಹೊಂದಾಣಿಕೆ ಇರುವುದು ಆಪರೇಷನ್ ಕಮಲದ ಸಹಕಾರದಲ್ಲಿ ಮಾತ್ರವೇ?, ಕದ್ದ ಶಾಸಕರನ್ನು ಮುಂಬೈ ಹೋಟೆಲ್ನಲ್ಲಿ ಅಡಗಿಸಿಡಲು ಮಹಾರಾಷ್ಟ್ರ ಬಿಜೆಪಿಯ ಸಹಕಾರದ ಋಣ ಭಾರ ರಾಜ್ಯ ಬಿಜೆಪಿ ಸರ್ಕಾರಕ್ಕಿದೆಯೇ?, ಆ ಕಾರಣಕ್ಕೆ ಇಲ್ಲಿನ ನಾಯಕರು ಕರ್ನಾಟಕ ಹಿತ ಬಲಿ ಕೊಡುತ್ತಿದ್ದಾರೆಯೇ’ ಎಂದು ಕಾಂಗ್ರೆಸ್ ಗುಡುಗಿದೆ.
‘ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಚಲಾವಣೆಯಲ್ಲಿಲ್ಲದ ನಾಣ್ಯದಂತಾಗಿರುವಾಗ ಸಿಎಂ ಬೊಮ್ಮಾಯಿ ಅವರೂ ಈಗ ಸಂತೋಷ ಕೂಟಕ್ಕೆ ಹೈಜಂಪ್ ಮಾಡಿದರೆ? ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಯಡಿಯೂರಪ್ಪ ಅವರ ಫೋಟೊಗೆ ಜಾಗ ನೀಡದ ಬಿಜೆಪಿ ಅಸಲಿಗೆ ಮಾಡಲು ಹೊರಟಿರುವುದು ‘ಯಡಿಯೂರಪ್ಪ ಮುಕ್ತ’ ಸಂಕಲ್ಪ! ಗುರುವಿಗೆ ಅವಮಾನಿಸುವ ನೇತೃತ್ವವನ್ನು ಸ್ವತಃ ಬೊಮ್ಮಾಯಿಯವರೇ ವಹಿಸಿರುವಂತಿದೆ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.