ಬೆಂಗಳೂರು: ನೀವು( ಸಿದ್ದರಾಮಯ್ಯ )ಮೈಸೂರಿನಲ್ಲಿ ಯಾರ ಹೆಸರಲ್ಲಿ ಎಲ್ಲೆಲ್ಲಿ ಆಸ್ತಿ ಮಾಡಿದ್ದೀರಿ ಹೇಳ್ಲಾ? ರೀ ಡೂ ಹೆಸರಲ್ಲಿ ಏನೇನು ಮಾಡಿದ್ದೀರಿ ಎಂಬುದು ಗೊತ್ತು. ಕಾಲ ಬಂದಾಗ ಎಲ್ಲವನ್ನು ಬಿಚ್ಚಿಡುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಕಿಡಿ ಕಾರಿದ್ದಾರೆ.
ಕೆಲವು ನಾಯಿ- ನರಿಗಳ ಜತೆ ಸೇರಿ ನನ್ನ ವಿರುದ್ಧ ಬಾಯಿಗೆ ಬಂದಂತೆ ತಮ್ಮ ಘನತೆ- ಗೌರವ ಮೀರಿ ಸಿದ್ದರಾಮಯ್ಯ ಮಾತನಾಡಿರುವುದು ನೋವು ಉಂಟು ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜಕೀಯದಲ್ಲಿ ಅವರಷ್ಟೇ ಸರ್ವೀಸ್ ಆಗಿದೆ. ಅವರು ಮಾಡಿಕೊಂಡ ಆಸ್ತಿ ಗಳ ಬಗ್ಗೆ ನನಗೂ ಮಾಹಿತಿ ಇದೆ. ಯಾರದ್ದೋ ಮಾತು ಕೇಳಿಕೊಂಡು ನನ್ನ ಮೇಲೆ ಪರ್ಸಂಟೇಜ್ ಆರೋಪ ಮಾಡಿದ್ದಾರೆ. ನಾನು ಸಿದ್ದಗಂಗಾ ಮತ್ತು ಆದಿಚುಂಚನಗಿರಿ ಶ್ರೀಗಳ ಹೆಸರಿನಲ್ಲಿ ರಾಜಕೀಯ ಮಾಡಿದವನು. ಎಲ್ಲಿ ಯಾರ ಬಗ್ಗೆಯೂ ಏಕವಚನದಲ್ಲಿ ಮಾತನಾಡಿಲ್ಲ, ಆದರೆ ಹಿರಿಯರು- ಕಿರಿಯರು ಎಂಬ ವ್ಯತ್ಯಾಸ ಇಲ್ಲದೆ, ಎಲ್ಲರಿಗೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯಗೆ ಗೌರವ ತರುತ್ತದೆಯೇ ಎಂದು ಸೋಮಣ್ಣ ಪ್ರಶ್ನಿಸಿದರು.
ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಎಂದು ಹೇಳಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ಸೋತಿಲ್ಲವೇ? ರಾಜ್ಯದಲ್ಲಿ ಅವರೊಬ್ಬರೇ ಮಾಸ್ ಲೀಡರ್ ಅಲ್ಲ, ಆ ಭ್ರಮೆಯಲ್ಲಿದ್ದಾರೆ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.