ADVERTISEMENT

ಪಕೋಡ ಮಾರಲು ಹೇಳಿದ್ದ ಮೋದಿಗೆ ಪದವೀಧರರಿಂದ ಪಾಠ: ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 20:13 IST
Last Updated 16 ಜೂನ್ 2022, 20:13 IST
ಆರ್‌.ಧ್ರುವನಾರಾಯಣ
ಆರ್‌.ಧ್ರುವನಾರಾಯಣ   

ಮೈಸೂರು: ‘ಉದ್ಯೋಗ ಸೃಷ್ಟಿಸದೇ ಪಕೋಡ ಮಾರಲು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪದವೀಧರರು ಸೋಲಿನ ಉಡುಗೊರೆ ನೀಡಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ವ್ಯಂಗ್ಯವಾಡಿದರು.

‘ದಕ್ಷಿಣ ಪದವೀಧರರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಚುನಾವಣೆಯ ಗೆಲುವು ಮುಂಬರುವ ವಿಧಾನಸಭೆ- ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಎಂಟು ತಿಂಗಳ ಹಿಂದೆಯೇ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಅಭ್ಯರ್ಥಿ ಘೋಷಿಸಿದ್ದರು. ಪ್ರತಿ ಗ್ರಾಮಕ್ಕೂ ಕಾರ್ಯಕರ್ತರು ತೆರಳಿ ಮತದಾರರನ್ನು ಮನವೊಲಿಸಿದ್ದರು. ಸಂಘಟಿತ ಹೋರಾಟಕ್ಕೆ ಗೆಲುವು ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

‘ರಾಹುಲ್ ಗಾಂಧಿ ಬಿಜೆಪಿಗರಿಗೆ ಸಿಂಹಸ್ವಪ್ನವಾಗಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಆರಂಭಕ್ಕೆ ಬಿಜೆಪಿ ಹೆದರಿ ಇ.ಡಿ ಮೂಲಕ ದ್ವೇಷ ರಾಜಕಾರಣ ನಡೆಸುತ್ತಿದೆ. ದೆಹಲಿಯಲ್ಲಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವುದು ಖಂಡನೀಯ. ದೇಶವೇ ಗೂಂಡಾರಾಜ್ಯವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಭಟನೆಯಿಂದ ಕೊರೊನಾ ಸೋಂಕು ಹೆಚ್ಚಿದರೆ ಕಾಂಗ್ರೆಸ್‌ ಹೊಣೆಯೆಂದು ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ. ಮೈಸೂರಿನಲ್ಲಿ 16 ಸಾವಿರ ಜನರನ್ನು ಸೇರಿಸಿ ಯೋಗ ಮಾಡುತ್ತಿರುವ ಪ್ರಧಾನಿ ಮೋದಿ ಅವರಿಂದ ಕೊರೊನಾ ಹೆಚ್ಚಾಗುವುದಿಲ್ಲವೇ? ಸಚಿವರಿಗೆ ಸಾಮಾನ್ಯ ಜ್ಞಾನವಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.