ADVERTISEMENT

ಅಸಂಸದೀಯ ಪದ ಬಳಕೆ: ರಮೇಶ್‌ ಕುಮಾರ್‌- ಸುಧಾಕರ್ ಜಟಾಪಟಿ

ತೆಗೆಸಿ ಹಾಕಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 23:16 IST
Last Updated 23 ಸೆಪ್ಟೆಂಬರ್ 2020, 23:16 IST
ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌
ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌   

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಕಾಂಗ್ರೆಸ್‌ನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಧ್ಯದ ಜಟಾಪಟಿಗೆ ವಿಧಾನಸಭೆ ಬುಧವಾರ ಸಾಕ್ಷಿಯಾಯಿತು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಉತ್ತರ ನೀಡಿದ ಸುಧಾಕರ್‌, ‘ಸಚಿವರನ್ನು ಒಳಗೊಂಡ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿ ಪಿಪಿಇ ಕಿಟ್‌ಗಳ ಖರೀದಿ ಮಾಡಲಾಗುತ್ತಿದೆ’ ಎಂದರು.

ಆಗ ಎದ್ದು ನಿಂತ ರಮೇಶ್‌ ಕುಮಾರ್‌, ‘ಪಿಪಿಇ ಕಿಟ್‌ಗಳ ಖರೀದಿ ದರದ ಏರಿಳಿತವನ್ನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೊದಲು ಕಿಟ್‌ಗಳನ್ನು ₹300ಕ್ಕೆ ಖರೀದಿಸಿದೆವು. ಆ ಬಳಿಕ ಬೆಲೆ ಹೆಚ್ಚಾಯಿತು. ವಿವಿಧ ಸಮಿತಿಗಳು ಪರಿಶೀಲಿಸಿವೆ ಎನ್ನುತ್ತಿದ್ದಾರೆ. ಈ ಸಮಿತಿಯಲ್ಲಿ ಬೃಹಸ್ಪತಿಗಳಿದ್ದಾರೆ. ಹಾಗಿದ್ದರೆ ಆ ದೇಶಭಕ್ತರು ಮಾಡಿರುವ *** ಕೆಲಸವನ್ನು ಒಪ್ಪಿಕೊಳ್ಳಬೇಕೇ’ ಎಂದು ಪ್ರಶ್ನಿಸಿದರು.

ADVERTISEMENT

ಸುಧಾಕರ್‌, ‘ಈ ಹಿಂದೆಯೂ ರಮೇಶ್‌ ಕುಮಾರ್ ಇಂತಹುದೇ ಪದ ಬಳಸಿದ್ದರು. ಈಗ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ,‘ರಮೇಶ್‌ ಕುಮಾರ್‌ ಅವರ ಮೇಲೆ ಗೌರವ ಇದೆ. ಅವರನ್ನು ನಾನು *** ವ್ಯಕ್ತಿ ಎಂದು ಕರೆಯಲೇ. ಇದು ರೌಡಿಗಳು ಬಳಸುವ ಭಾಷೆ. ಮಕ್ಕಳು ಅದನ್ನು ಬಳಸಿದರೆ ನಾವು ಗದರಿಸುತ್ತೇವೆ’ ಎಂದರು.

‘ಉದ್ವೇಗದಿಂದ ಈ ಮಾತು ಹೇಳಿದ್ದೇನೆ. ನಾನು ಬಳಸಿದ ಪದ ಅಸಂಸದೀಯವಾಗಿದೆ ಎಂದು ಸಭಾಧ್ಯಕ್ಷರು ರೂಲಿಂಗ್‌ ನೀಡಿದರೆ ಕ್ಷಮೆಯಾಚಿಸುತ್ತೇನೆ’ ಎಂದು ರಮೇಶ್‌ ಕುಮಾರ್ ಹೇಳಿದರು. ಈ ಹಿಂದೆ ಸದನದಲ್ಲಿ ಜೆ.ಎಚ್‌.ಪಟೇಲರು, ಗೋಪಾಲಗೌಡರು ಎಂತಹ ಪದ ಬಳಸಿದ್ದರು ಎಂಬುದನ್ನು ನೋಡಿ ಎಂದೂ ಹೇಳಿದರು. ‘ಇದು ಸೌಜನ್ಯದ ಭಾಷೆ ಅಲ್ಲ’ ಎಂದು ಹೇಳಿದ ಕಾಗೇರಿ ಹೇಳಿದರು. ಈ ಪದವನ್ನೂ ಕಡತದಿಂದ ತೆಗೆದು ಹಾಕಲಾಗುವುದು ಎಂದರು. ಬಳಿಕ ರಮೇಶ್‌ ಕುಮಾರ್ ಕ್ಷಮೆಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.