ಬೆಂಗಳೂರು: ‘ಬಿಜೆಪಿಯವರಿಗಿಂತ ಹತ್ತಿರದಿಂದ ಎಸ್.ಟಿ. ಸೋಮಶೇಖರ್ ಅವರನ್ನು ನಾನು ನೋಡಿದ್ದೇನೆ. ಅವರು ನಮ್ಮ ನಾಯಕರಾಗಿದ್ದವರು. ಪಕ್ಷದ ವಕ್ತಾರರಾಗಿ ಕೆಲಸ ಮಾಡಿದ್ದಾರೆ. ನಾವು ಜೊತೆಯಲ್ಲೇ ರಾಜಕಾರಣ ಮಾಡಿದ್ದೇವೆ. 20 ವರ್ಷದಿಂದ ಸೋಮಶೇಖರ್ ಏನೇನು ಮಾಡಿದ್ದಾರೆ ಅದನ್ನು ಮೊದಲು ಹೇಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
‘ರಮೇಶ್ ಜಾರಕಿಹೊಳಿ ಸಿ.ಡಿ ಕಾಂಗ್ರೆಸ್ ಪಿತೂರಿ’ ಎಂದು ಸೋಮಶೇಖರ್ ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಸೋಮಶೇಖರ್ ಜೊತೆಯಲ್ಲಿ ಇರುವವರು ಎಲ್ಲರೂ ಸೇರಿಕೊಂಡು ಒಂದು ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ಬಿಚ್ಚಡಲಿ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ 20 ವರ್ಷ ಅವರು ಏನೇನು ಮಾಡಿದ್ದಾರೋ ಅದನ್ನೂ ಹೇಳಲಿ’ ಎಂದರು.
‘ಇದನ್ನು ಅವರೇ ಹೇಳಿದ್ದಾರೋ, ಬೇರೆಯವರು ಹೇಳಿಸಿದ್ದಾರೋ, ಅಂತೂ ಬಿಜೆಪಿ ಪರವಾಗಿ ಹೇಳಿದ್ದಾರೆ. ಅವರು ನಮ್ಮ ಪಕ್ಷದಲ್ಲಿದ್ದಾಗ ಏನು ಮಾಡಿದ್ದಾರೆಂದು ಸಾಕ್ಷಿ ಸಮೇತ ಹೇಳಲಿ. ಈ ಪ್ರಕರಣವನ್ನು ನಾವೂ ಗಮನಿಸುತ್ತಿದ್ದೇವೆ. ಈ ವಿಚಾರವಾಗಿ ಸರ್ಕಾರವೇ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಬೇಕಿತ್ತು. ಯಾಕೆ ಇನ್ನೂ ಕೇಸು ಹಾಕಿಲ್ಲ, ಕೇಸು ತೆಗೆದುಕೊಂಡಿಲ್ಲ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.