ADVERTISEMENT

ಡಿಕೆಶಿ ಮುಖ್ಯಮಂತ್ರಿ‌ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ಧ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2021, 5:58 IST
Last Updated 26 ಅಕ್ಟೋಬರ್ 2021, 5:58 IST
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ‌ ಕನಸಿಗೆ ಎಳ್ಳು ನೀರು ಬಿಡಲು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿಕೆಶಿ ಕಾಸು - ಸಿದ್ದರಾಮಯ್ಯ ಬಾಸು’ ಎಂಬಂತಾಗಿದೆ ಕರ್ನಾಟಕ ಕಾಂಗ್ರೆಸ್ ಸ್ಥಿತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಲೇ ಸಾಗುತ್ತಿರುವ ಸಿದ್ದರಾಮಯ್ಯ ಪರೋಕ್ಷವಾಗಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಡಿಕೆಶಿಯವರದ್ದು ಬರೇ ಕನಸೇ’ ಎಂದು ಪ್ರಶ್ನಿಸಿದೆ.

‘ಡಿಕೆಶಿ ಅವರೇ, ಸಿದ್ದರಾಮಯ್ಯ ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ನೀವು ಎಷ್ಟೇ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಿಲ್ಲ. ನಿಮ್ಮ ಮುಖ್ಯಮಂತ್ರಿ‌ ಕನಸಿಗೆ ಎಳ್ಳು ನೀರು ಬಿಡಲು ಅವರು ಸಿದ್ದರಾಗಿದ್ದಾರೆ. ನಿಮ್ಮದೀಗ ‘ಬಗಲ್ ಮೇ ದುಷ್ಮನ್’ ಪರಿಸ್ಥಿತಿ!’ #ಅಸಹಾಯಕಡಿಕೆಶಿ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.

‘ಅಲ್ಪಸಂಖ್ಯಾತರಿಗೆ ₹3 ಸಾವಿರ ಕೋಟಿ, ಕಸೂತಿಗೆ ₹100 ಕೋಟಿ. ಅದಕ್ಕಿಷ್ಟು, ಇದಕ್ಕಿಷ್ಟು, ಸಂಪುಟದಲ್ಲಿ ಇಂತಿಂಥವರೇ ಇರುತ್ತಾರೆ... ಈ ರೀತಿ ಸಿದ್ದರಾಮಯ್ಯ ಸ್ವಯಂ ಘೋಷಣೆ ಮಾಡುತ್ತಲೇ ಇದ್ದಾರೆ. ಅಂದರೆ ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನಿಮ್ಮ ಕತೆಯೇನು ಡಿಕೆಶಿ’ ಎಂದು ಬಿಜೆಪಿ ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.