ಬೆಂಗಳೂರು: ಆಡಳಿತಾರೂಢ ಬಿಜೆಪಿಗೆ ಕೊರೊನಾ ನಿಯಂತ್ರಣಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾದಿಂದ ಜನ ತತ್ತರಿಸುತ್ತಿದ್ದರೂ ಚುನಾವಣಾ ಪ್ರಚಾರದ ದೊಡ್ಡ ದೊಡ್ಡ ರ್ಯಾಲಿ ನಡೆಸಿದ್ದರು. ಇತ್ತ ರಾಜ್ಯದಲ್ಲಿ ಯಡಿಯೂರಪ್ಪ ಅವರು ಸ್ವತಃ ಜ್ವರದಿಂದ ಬಳಲುತ್ತಿದ್ದರೂ ಚುನಾವಣಾ ಪ್ರಚಾರ ನಡೆಸಿದ್ದರು. ಆಡಳಿತಾರೂಢ ಬಿಜೆಪಿಗೆ ಕೊರೊನಾ ನಿಯಂತ್ರಣಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ’ ಎಂದು ವಾಗ್ದಾಳಿ ನಡೆಸಿದೆ.
‘ಕೇಂದ್ರದಿಂದ ಎಷ್ಟು ಲಸಿಕೆ ತರಿಸಿದ್ದೀರಿ?, ರಾಜ್ಯದಲ್ಲಿ ಎಷ್ಟು ಲಸಿಕೆ ದಾಸ್ತಾನಿದೆ?, ಇದುವರೆಗೂ ರಾಜ್ಯದಲ್ಲಿ ಲಸಿಕೆ ನೀಡುವಿಕೆಯ ಪ್ರಗತಿ ಎಷ್ಟು?, ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಲಸಿಕೆ ನೀಡಲಾಗಿದೆ?, ಲಸಿಕೆ ಇಲ್ಲವೆಂದು ಜನ ವಾಪಸ್ ತೆರಳುತ್ತಿರುವುದೇಕೆ? ಈ ಕುರಿತು ಬಿಜೆಪಿಯವರೇ ಸುಳ್ಳುಗಳನ್ನು ಬಿಟ್ಟು ಸತ್ಯವನ್ನು ಹೇಳಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಅಂತ್ಯಸಂಸ್ಕಾರ ವ್ಯವಸ್ಥೆಯ ಕೊರತೆ, ಬೆಡ್ಗಳ ಕೊರತೆ, ಲಸಿಕೆಗಳ ಕೊರತೆ, ರೆಮಿಡಿಸಿವಿರ್ ಕೊರತೆ, ವೈದ್ಯರ ಕೊರತೆ, ಆಕ್ಸಿಜನ್ ಕೊರತೆ, ಐಸೋಲೇಶನ್ ಕೇಂದ್ರಗಳ ಕೊರತೆ. ಕೊರೊನಾ ಬಂದು ವರ್ಷವಾಗಿದೆ. ಸರ್ಕಾರ ಕಲಿತ ಪಾಠವಾದರೂ ಏನು? ಮಾಡಿಕೊಂಡ ಸಿದ್ಧತೆಯಾದರೂ ಏನು? ಬಿಜೆಪಿಯವರೇ ನಿಮ್ಮದು ಬೇಜವಾಬ್ದಾರಿ ಸರ್ಕಾರವಲ್ಲದೆ ಇನ್ನೇನು? ಎಂದು ಕಾಂಗ್ರೆಸ್ ಟೀಕಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.