ಬೆಂಗಳೂರು: ಔಷಧಿ ನೀಡಿಯಾದರೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬಂಧಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ಒತ್ತಾಯಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬೊಮ್ಮಾಯಿ ಅವರೇ, ಅತ್ಯಾಚಾರ ಆರೋಪಿ ರಮೇಶ ಜಾರಕಿಹೊಳಿ ಅವರಿಗೆ ಜ್ವರ ಶಮನವಾಯಿತೆ?, ಆಗಿಲ್ಲವೆಂದರೆ ಮಾತ್ರೆ, ಔಷಧ ನೀಡಿ ಬಂಧಿಸಿ ಸ್ವಾಮಿ! ಜನತೆ ಕಾನೂನಿನ ಮೇಲಿಟ್ಟಿರುವ ಗೌರವ ಉಳಿಯಲಿ’ ಎಂದು ಆಗ್ರಹಿಸಿದೆ.
‘ಉಪ ಚುನಾವಣೆ ಆದ ಮೇಲೆ ಕಾಂಗ್ರೆಸ್ನವರು ಬಿಜೆಪಿ ಸೇರುತ್ತಾರೆ ಎಂದು ಹೇಳುತ್ತಾ ನಳಿನ್ ಕುಮಾರ್ ಕಟೀಲ್ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ಉಪ ಚುನಾವಣೆ ಆದ ಮೇಲೆ ಬಿಎಸ್ವೈ ಮುಕ್ತ ಬಿಜೆಪಿ ಆಗುತ್ತದೆ ಎಂದು ಯತ್ನಾಳ್ ಹೇಳುತ್ತಿದ್ದಾರೆ ಅರಿವಿದೆಯೇ?, ಬಿಜೆಪಿ ಪಕ್ಷ ಮುಳುಗುತ್ತಿರುವ ಮುರಿದ ದೋಣಿ, ಅದನ್ನು ಹತ್ತುವ ಮೂರ್ಖರು ಯಾರಿಲ್ಲ ಬಿಡಿ!’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
ಜನವಿರೋಧಿ ಬಿಜೆಪಿ ಪಕ್ಷವನ್ನು ಜನತೆ ಪ್ರತಿ ಮನೆ ಎದುರು ‘ಬಿಜೆಪಿ ವರಿಷ್ಠರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್ ಹಾಕಿ ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ ಎಂದು ಕಿಡಿಕಾರಿದೆ.
‘ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರೇ ವಿಷಕಾರಿ ಆಗಿದ್ದಾರೆ. ಅವರ ನಿಜವಾದ ಮುಖ ಅರ್ಥ ಮಾಡಿಕೊಂಡ ಕಲಬುರ್ಗಿ ಜನ ಅವರನ್ನು ಸೋಲಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.