ಮೈಸೂರು: ‘ಮಾಧ್ಯಮಗಳು ನಮ್ಮನ್ನು ಅಬ್ಬೇಪಾರಿಗಳು, ಅನರ್ಹರು ಎಂದು ಕರೆದು ಅವಮಾನ ಮಾಡುತ್ತಿವೆ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಜನ ಛೀಮಾರಿ, ಧಿಕ್ಕಾರ ಹಾಕಲಿಲ್ಲ. ಬದಲಾಗಿ ಸಮ್ಮಿಶ್ರ ಸರ್ಕಾರದ ಪತನವನ್ನು ಸಂಭ್ರಮಿಸಿದರು’ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು.
ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಆಯೋಜಿಸಿದ್ದ ‘ಶಾಸಕರ ಅನರ್ಹತೆ ಮತ್ತು ಸಾವಿಂಧಾನಿಕ ಉಲ್ಲಂಘನೆ ಪರಾಮರ್ಶೆ’ ಸಂವಾದದಲ್ಲಿ ಮಾತನಾಡಿದರು.
‘ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ನಾವು ಅನರ್ಹರೂ ಅಲ್ಲ, ಅಪರಾಧಿಗಳೂ ಅಲ್ಲ. ಸದನದಲ್ಲಿ ಪಾಲ್ಗೊಳ್ಳಲು
ಸಾಧ್ಯವಿಲ್ಲ ಅಷ್ಟೆ’ ಎಂದರು.
‘ಬಿಜೆಪಿ ಸರ್ಕಾರ ಬರಲು ಪ್ರಮುಖ ಕಾರಣ, ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್. ಬಿಜೆಪಿಯು ವಿಶ್ವಾಸಮತ ಯಾಚನೆ ಮಾಡುವ ಮುನ್ನಾದಿನ ಅಂದರೆ ಭಾನುವಾರ ಸುದ್ದಿಗೋಷ್ಠಿ ಕರೆದು ಶಾಸಕರನ್ನು ಅನರ್ಹಗೊಳಿಸಿದರು. ಈ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಟ್ಟರು’ ಎಂದು ತಿಳಿಸಿದರು.
‘ಮೈತ್ರಿ ಸರ್ಕಾರದ ರಾಕ್ಷಸ ರಾಜಕಾರಣ ಕೊನೆಗಾಣಿಸಲು ರಾಜೀನಾಮೆ ನೀಡಬೇಕಾಯಿತು. ನಾನಿದ್ದ ಪಕ್ಷವೇ ತನ್ನ ಸಿದ್ಧಾಂತವನ್ನು ಗಾಳಿ ತೂರಿದಾಗ ನಾನಿದ್ದು ಪ್ರಯೋಜನವೇನು? ಹೀಗಾಗಿ, ಪಕ್ಷವನ್ನೇ ಗಾಳಿಗೆ ತೂರಿದೆ. ಸಂವಿಧಾನದ ಪ್ರಕಾರ ನಾವು ನಡೆದರೆ, ನಮಗೆ ರಕ್ಷಣೆ ನೀಡಬೇಕಿದ್ದ ಅಂದಿನ ಸ್ಪೀಕರ್ ಸಂವಿಧಾನದ ವಿರುದ್ಧವಾಗಿ ಹೆಜ್ಜೆ ಇಟ್ಟರು’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.