ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದೆನ್ನಲಾದ ಸಿ.ಡಿ ಪ್ರಕರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಇದರ ನಡುವೆ ಕಾಂಗ್ರೆಸ್–ಬಿಜೆಪಿ ಟ್ವೀಟ್ ಸಮರವೂ ಜೋರಾಗಿದೆ.
ಪ್ರಕರಣ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಂತ್ರಸ್ತೆ ಬಂದು ನ್ಯಾಯಾಧೀಶರೆದುರು ಹೇಳಿಕೆಯನ್ನೂ ಕೊಟ್ಟಾಯಿತು. ಇಷ್ಟಾದರೂ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಬೀದಿ ಗೂಳಿಯಂತೆ ತಿರುಗಿಕೊಂಡಿದ್ದಾರೆ. ಇನ್ನೂ ಕೂಡ ಆರೋಪಿಯ ಬಂಧನವಾಗಲಿಲ್ಲ. ಏಕೆ ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದೆ.
‘ಬಿಜೆಪಿ ಆಡಳಿತದಲ್ಲಿ ಕಾನೂನು ಬದಲಾಗಿದೆ. ಇಲ್ಲಿ ಸಂತ್ರಸ್ತೆಯನ್ನು ಪೊಲೀಸ್ ವಶಕ್ಕೆ ಪಡೆಯಬಹುದು, ಆರೋಪಿ ಸ್ವಇಚ್ಛೆಯಂತೆ ತಿರುಗಾಡಿಕೊಂಡಿರಬಹುದು!!’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
‘ಸಂತ್ರಸ್ತೆ ನನಗೆ ಜೀವ ಬೆದರಿಕೆ ಇದೆ ಎಂದಿದ್ದಾಳೆ. ಸಂತ್ರಸ್ತೆ ಪರ ವಕೀಲರು ನಮಗೂ ಬೆದರಿಕೆ ಇದೆ ಎಂದಿದ್ದಾರೆ. ಆರೋಪಿ ಪ್ರಭಾವಿಯಾದ ಕಾರಣ ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ದಿನೇಶ್ ಕಲ್ಲಹಳ್ಳಿ ಕೊಟ್ಟ ದೂರನ್ನು ವಾಪಸ್ ಪಡೆದ ಘಟನೆ ಇದೆಲ್ಲದಕ್ಕೂ ಪುಷ್ಠಿ ಕೊಡುತ್ತದೆ. ಆದರೂ ಆರೋಪಿ ಬಂಧನವಿಲ್ಲ ಏಕೆ ಬೊಮ್ಮಯಿ ಅವರೇ ಉತ್ತರಿಸಬೇಕು’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
‘ಸಂತ್ರಸ್ತೆ ನಿರ್ಭಿತಿಯಿಂದ, ಯಾವುದೇ ಪ್ರಭಾವಕ್ಕೂ ಒಳಗಾಗದೆ, ಯಾವುದೇ ಅಂಜಿಕೆಯಿಲ್ಲದೆ, ಒತ್ತಡವಿಲ್ಲದೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾಳೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ. ಸಂತ್ರಸ್ತೆ ಕೋರ್ಟ್ಗೆ ಬಂದು ಹೇಳಿಕೆ ನೀಡಿದ ಮೇಲೂ ಅತ್ಯಾಚಾರ ಆರೋಪಿಯ ಬಂಧನವಾಗಲಿಲ್ಲವೆಂದರೆ ಏನರ್ಥ ಬೊಮ್ಮಾಯಿ ಅವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಯುವತಿ ವಿಡಿಯೊ ಹೇಳಿಕೆ ನೀಡಿದಾಗಲೂ ಕೇಸ್ ಹಾಕಲಿಲ್ಲ. ಸಂತ್ರಸ್ತೆ ದೂರು ಸಲ್ಲಿಸಿ, ಎಫ್ಐಆರ್ ದಾಖಲಾದರೂ ಬಂಧಿಸಲಿಲ್ಲ. ಕೋರ್ಟ್ಗೆ ಹಾಜರಾಗಿ ಹೇಳಿಕೆ ನೀಡಿದರೂ ಬಂಧನವಿಲ್ಲ. ಬೊಮ್ಮಯಿ ಅವರೇ ಇಷ್ಟಾದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ? ಜನತೆಗೆ ಕಾನೂನಿನ ಮೇಲಿದ್ದ ನಂಬಿಕೆಯನ್ನೇಕೆ ನಾಶಗೊಳಿಸುತ್ತಿದ್ದೀರಿ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.