ADVERTISEMENT

ಒಬ್ಬರ ಅನಾರೋಗ್ಯವನ್ನು ಹಿಯಾಳಿಸುವ ವಿಕೃತಿ ಇರುವುದು ಬಿಜೆಪಿಗೆ ಮಾತ್ರ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2022, 6:19 IST
Last Updated 3 ಜೂನ್ 2022, 6:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಬ್ಬರ ಅನಾರೋಗ್ಯವನ್ನು ಹಿಯಾಳಿಸುವ ವಿಕೃತಿ ಇರುವುದು ಬಿಜೆಪಿಯವರಿಗೆ ಮಾತ್ರ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಿಡಿ’ ಪಕ್ಷವು ‘ಇಡಿ’ಯನ್ನು ಚೂ ಬಿಟ್ಟರೆ ಹೆದರುವವರು ಯಾರೂ ಇಲ್ಲ. ಹಾಗೆಯೇ ಕೋವಿಡ್ ವರದಿ ನೀಡುವುದು ನಿಮ್ಮದೇ ಸರ್ಕಾರದ ವ್ಯವಸ್ಥೆ ಎಂಬುದು ನೆನಪಿರಲಿ. ಎಸ್‌ಐಟಿ ತನಿಖೆ ತಪ್ಪಿಸಲು ರಮೇಶ್ ಜಾರಕಿಹೊಳಿಯ ಕೋವಿಡ್ ಸೋಂಕಿನ ನಾಟಕವನ್ನು ರಾಜ್ಯ ಕಂಡಿದೆ’ ಎಂದು ಕಿಡಿಕಾರಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೋವಿಡ್ ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಗುರುವಾರ ತಿಳಿಸಿದ್ದರು.

ADVERTISEMENT

ಸೋನಿಯಾ ಗಾಂಧಿ ಅವರು ಇ.ಡಿ ವಿಚಾರಣೆಗೆ ಹಿಂದಿಟ್ಟು ಹಾಕುವ ಉದ್ದೇಶದಿಂದ ಕೋವಿಡ್‌ ನೆಪ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಟ್ವಿಟರ್‌ನಲ್ಲಿ ಆರೋಪಿಸಿತ್ತು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್‌ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಸಮನ್ಸ್‌ ಜಾರಿ ಮಾಡಿತ್ತು.

ಸೋನಿಯಾ ಗಾಂಧಿಗೆ ಜೂನ್ 8ರಂದು ಹಾಗೂ ರಾಹುಲ್ ಗಾಂಧಿಗೆ ಜೂನ್ 2ರಂದು ಹಾಜರಾಗುವಂತೆ ಇ.ಡಿ. ಸೂಚಿಸಿತ್ತು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.