
ವಿಜಯನಗರ ಜಿಲ್ಲೆ ಬ್ಯಾಲಹುಣ್ಸಿಯಲ್ಲಿ ಮಳೆಯಿಂದ ಭತ್ತದ ಪೈರು ನೆಲಕಚ್ಚಿರುವುದು
ಪ್ರಜಾವಾಣಿ ಚಿತ್ರ
ಬೆಂಗಳೂರು: ಕಿತ್ತೂರು ಕರ್ನಾಟಕ ಭಾಗದ ಧಾರವಾಡ, ಬಳ್ಳಾರಿ, ವಿಜಯನಗರ ಮತ್ತು ಉತ್ತರ ಕನ್ನಡ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಬೀದರ, ಯಾದಗಿರಿ, ಕೊಪ್ಪಳ ಜಿಲ್ಲೆಗಳ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದ್ದು, ಹಲವೆಡೆ ಬೆಳೆ ನೆಲ ಕಚ್ಚಿದೆ.
ವಿವಿಧ ಜಿಲ್ಲೆಗಳಲ್ಲಿ ಭತ್ತದ ಫಸಲು ನೆಲಕ್ಕೊರಗಿದ್ದರೆ, ವಿಜಯನಗರ ಜಿಲ್ಲೆಯಲ್ಲಿ ಒಕ್ಕಣೆ ಮಾಡಿದ್ದ ಮೆಕ್ಕೆಜೋಳ ರಾಶಿ ನೀರು ಪಾಲಾಗಿದೆ. ಬೆಳೆಹಾನಿಗೆ ಆತಂಕಗೊಂಡ ರೈತರೊಬ್ಬರು ಕೊಪ್ಪಳ ತಾಲ್ಲೂಕು ಬಸಾಪುರದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಿತ್ತೂರು ಕರ್ನಾಟಕದ ವಿವಿಧೆಡೆ ಗುರುವಾರ ರಾತ್ರಿ ಶುರುವಾದ ಮಳೆಯು ಶುಕ್ರವಾರ ಸಂಜೆಯವರೆಗೂ ಮುಂದುವರೆಯಿತು.
ವಿಜಯುನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ನೂರಾರು ಎಕರೆಯಲ್ಲಿ ಭತ್ತದ ಬೆಳೆ ನೆಲಕ್ಕೊರಗಿದೆ. ಅಲ್ಲಲ್ಲಿ ಮೆಕ್ಕೆಜೋಳ ಬೆಳೆ ಹಾನಿಗೀಡಾಗಿದೆ. ಕೆಲ ಮನೆಗಳಿಗೆ ಹಾನಿಯಾಗಿದೆ. ರಸ್ತೆಯಲ್ಲಿ ರೈತರು ಒಕ್ಕಣೆ ಮಾಡಿದ್ದ ಮೆಕ್ಕೆಜೋಳ ರಾಶಿ ನೀರುಪಾಲಾಗಿವೆ. ಹರಪನಹಳ್ಳಿ ತಾಲ್ಲೂಕಿನಲ್ಲಿ 50 ಎಕರೆಯಷ್ಟು ಭತ್ತದ ಫಸಲು ಹಾನಿಯಾಗಿದೆ.
ಧಾರವಾಡ ಜಿಲ್ಲೆ ಅಳ್ನಾವರದಲ್ಲಿ ಭತ್ತ, ಗೋವಿನ ಜೋಳ ಬೆಳೆ ಹಾನಿಯಾಗಿದೆ. ತೇವಾಂಶದಿಂದ ಕಾಳುಗಳು ಪೊಳ್ಳಾಗುವ ಸ್ಥಿತಿ ಇದೆ. ಹಲವೆಡೆ ಫಸಲು ಮಳೆ ನೀರಿಗೆ ತೇಲಿ ಹೋಗಿದೆ.
ಉತ್ತರ ಕನ್ನಡ ಜಿಲ್ಲೆ ಬಿಣಗಾ ಗ್ರಾಮದ ಬಳಿ ನೌಕಾನೆಲೆ ಗೇಟ್ ಎದುರು ಮಾವಿನ ಮರ ಬಿದ್ದು 7 ಬೈಕ್ ಜಖಂಗೊಂಡಿದೆ. ಒಂದು ಆಕಳು ಸತ್ತಿದ್ದು, ಮತ್ತೊಂದಕ್ಕೆ ಗಾಯವಾಗಿದೆ.
ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿರುಗಾಳಿಯೊಂದಿಗೆ ಮಳೆ ಸುರಿದಿದೆ. ಅರಬ್ಬಿ ಸಮುದ್ರವು ಪ್ರಕ್ಷುಬ್ಧಗೊಂಡಿದೆ. ಮೀನುಗಾರಿಕೆಯ ದೋಣಿಗಳು ಬಂದರಿನಲ್ಲಿಯೇ ಲಂಗರು ಹಾಕಿವೆ. ಕೇರಳ, ತಮಿಳುನಾಡು ಮೂಲದ ದೋಣಿಗಳು ಕೂಡಾ ಇಲ್ಲಿ ನಿಲುಗಡೆ ಆಗಿವೆ.
ಕೊಪ್ಪಳ ವರದಿ: ಮಳೆ ಹಾಗೂ ಗಾಳೆ ಯಿಂದ ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಹಾನಿಯಾಗಿದ್ದು, ಇದರಿಂದ ಮನ ನೊಂದು ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದ ರೈತ ಲಕ್ಷ್ಮಣ ರಾಜರಾಮ ಪೇಟೆ ಕ್ರಿಮಿನಾಶಕ ಸೇವಿಸಲು ಮುಂದಾ ಗಿದ್ದ ಘಟನೆ ಶುಕ್ರವಾರ ನಡೆದಿದೆ.
ಅಕ್ಕಪಕ್ಕದಲ್ಲಿದ್ದರು ರೈತನನ್ನು ತಡೆದು ಸಮಾಧಾನ ಪಡಿಸಿದ್ದಾರೆ. ಲಕ್ಷ್ಮಣ ಅವರು ಎಂಟು ಎಕರೆಯಲ್ಲಿ ಭತ್ತ ಬೆಳೆದಿದ್ದು, ಬೆಳೆ ನಷ್ಟದ ಭೀತಿಯಲ್ಲಿದ್ದಾರೆ.
ಕೊಪ್ಪಳ, ಗಂಗಾವತಿ, ಕಾರಟಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತದ ಬೆಳೆ ಮಳೆ, ಗಾಳಿಗೆ ನೆಲಕ್ಕೊರಗಿದೆ. ಗುರು ವಾರ ರಾತ್ರಿ ಹಾಗೂ ಶುಕ್ರವಾರ ಸಂಜೆ ತನಕ ಮಳೆಯಾಗಿದೆ. ‘ಇಲಾಖೆ ಸಿಬ್ಬಂದಿ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ್ದಾರೆ. ಮಳೆ ನಿಂತ ಬಳಿಕ ಹಾನಿ ಪ್ರಮಾಣ ಗೊತ್ತಾಗಲಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ತಿಳಿಸಿದರು.
ಬೀದರ್ ಜಿಲ್ಲೆಯ ಬೀದರ್, ಹುಮನಾಬಾದ್, ಹುಲಸೂರ ಹಾಗೂ ಭಾಲ್ಕಿಯಲ್ಲಿ ಶುಕ್ರವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಮಳೆಯಾಯಿತು.ಯಾದಗಿರಿ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಜಿಟಿಜಿಟಿ ಮಳೆಯಿಂದ ಹಿಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಗೆ ಹಿನ್ನಡೆಯಾಗಿದೆ. ತೆನೆ ಕಟ್ಟಿದ ಭತ್ತದ ಪೈರು ಕೆಲವೆಡೆ ನೆಲಕಚ್ಚಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಕೊಯ್ಲಿಗೆ ಬಂದ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಯಾದಗಿರಿ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಜಿಟಿಜಿಟಿ ಮಳೆಯಿಂದ ಹಿಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಗೆ ಹಿನ್ನಡೆಯಾಗಿದೆ. ತೆನೆ ಕಟ್ಟಿದ ಭತ್ತದ ಪೈರು ಕೆಲವೆಡೆ ನೆಲಕಚ್ಚಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಕೊಯ್ಲಿಗೆ ಬಂದ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ ಮೂರು ಕ್ರೆಸ್ಟ್ಗೇಟ್ ತೆರೆದು ಶುಕ್ರವಾರ ನದಿಗೆ ನೀರು ಹರಿಸಲಾಯಿತು
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ ಮೂರು ಕ್ರೆಸ್ಟ್ಗೇಟ್ ತೆರೆದು ಶುಕ್ರವಾರ ನದಿಗೆ ನೀರು ಹರಿಸಲಾಯಿತು
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಶುಕ್ರವಾರ ಮೂರು ಕ್ರಸ್ಟ್ಗೇಟ್ ತೆರೆದು ನೀರು ಹೊರಬಿಡಲಾಗಿದೆ. 8,970 ಕ್ಯೂಸೆಕ್ ನೀರು ನದಿಗೆ, ಕಾಲುವೆ ಮತ್ತು ವಿದ್ಯುತ್ ಉತ್ಪಾದನೆಗೆ 13,524 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
‘ಸದ್ಯ ಒಳಹರಿವು ಪ್ರಮಾಣ 22,938 ಕ್ಯೂಸೆಕ್ ಇದೆ. ಒಳಹರಿವು ಹೆಚ್ಚಳ
ವಾದರೆ ಹೊರಹರಿವು ಹೆಚ್ಚಲಿದೆ’ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.
1,633 ಅಡಿ ಎತ್ತರದ ಅಣೆಕಟ್ಟೆಯ ಕ್ರಸ್ಟ್ಗೇಟ್ಗಳು ಶಿಥಿಲಗೊಂಡಿವೆ. ಇವುಗಳನ್ನು ಬದಲಿಸಬೇಕು ಎಂಬ ತಜ್ಞರ ವರದಿ ಹಾಗೂ ತಜ್ಞರ ನೀಡಿದ ಸಲಹೆಯಂತೆ ಗರಿಷ್ಠ 1,626 ಅಡಿ ಎತ್ತರಕ್ಕಷ್ಟೇ (ಗರಿಷ್ಠ 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಬದಲು 80 ಟಿಎಂಸಿ ಅಡಿ) ನೀರು ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.