ADVERTISEMENT

Karnataka Rains | ಕರಾವಳಿಯಲ್ಲಿ ಬಿರುಸಿನ ಮಳೆ: ಹಲವೆಡೆ ಹಾನಿ

ಸುರತ್ಕಲ್‌ನಲ್ಲಿ 29 ಸೆಂ.ಮೀ ಮಳೆ ದಾಖಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
ಮಂಗಳೂರಿನ ಅದ್ಯಪಾಡಿ ಬಜಪೆ ಸಂಪರ್ಕಿಸುವ ರಸ್ತೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಟ್ಲಬೆಟ್ಟು ಎಂಬಲ್ಲಿ ಭೂಕುಸಿತ ಸಂಭವಿಸಿ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು
ಮಂಗಳೂರಿನ ಅದ್ಯಪಾಡಿ ಬಜಪೆ ಸಂಪರ್ಕಿಸುವ ರಸ್ತೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಟ್ಲಬೆಟ್ಟು ಎಂಬಲ್ಲಿ ಭೂಕುಸಿತ ಸಂಭವಿಸಿ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಲ್ಕೈದು ದಿನಗಳಿಂದ ಬಿರುಸಿನಿಂದ ಸುರಿಯುತ್ತಿರುವ ಮಳೆಯ ಅಬ್ಬರ ಮುಂದುವರಿದಿದೆ.

ಸುರತ್ಕಲ್‌ನಲ್ಲಿ ದಾಖಲೆ 29 ಸೆಂ.ಮೀ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವಿನ ಮಟ್ಟ 7 ಮೀಟರ್‌ಗೆ ಏರಿಕೆಯಾಗಿದೆ.

ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ರಸ್ತೆ ಬದಿಯ ಗುಡ್ಡ ಕುಸಿದು ಸಂಚಾರ ಬಂದ್ ಮಾಡಲಾಗಿತ್ತು. ಮೇರಿಹಿಲ್‌ನಲ್ಲಿ ಕಾಂಪೌಂಡ್ ಕುಸಿದು 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿ ಸಮೀಪ ಮಣ್ಣಗುಂಡಿಯಲ್ಲಿ ಬೆಳಿಗ್ಗೆ ಗುಡ್ಡ ಕುಸಿಯಿತು. ಮಣ್ಣು ತೆರವುಗೊಳಿಸಿದ್ದರಿಂದ ಮಧ್ಯಾಹ್ನದ ನಂತರ ಸಂಚಾರ ವ್ಯವಸ್ಥೆ ಸುಗಮವಾಯಿತು.

ಬೈಕಂಪಾಡಿ ಕೈಗಾರಿಕಾ ಪ್ರದೇಶ ಜಲಾವೃತಗೊಂಡು, ಕಟ್ಟಡಗಳಿಗೆ ನೀರು ನುಗ್ಗಿದೆ. ಮುದ್ರಣಾಲಯ, ಗೋದಾಮುಗಳು, ಆಟೊಮೊಬೈಲ್, ಫ್ಯಾಬ್ರಿಕೇಶನ್, ಪ್ಲೈವುಡ್ ಸೇರಿದಂತೆ 20ಕ್ಕೂ ಹೆಚ್ಚು ಉದ್ದಿಮೆಗಳಿಗೆ ಹಾನಿಯಾಗಿದೆ ಎಂದು ಕೆನರಾ ಕೈಗಾರಿಕಾ ಸಂಘದ ಖಜಾಂಚಿ ರಾಮಚಂದ್ರ ತಿಳಿಸಿದರು.

ಬಂಟ್ವಾಳ, ಪುತ್ತೂರು, ಮಂಗಳೂರು ತಾಲ್ಲೂಕುಗಳಲ್ಲಿ ಮಳೆಯ ವಾತಾವರಣ ಇದ್ದರೆ, ಕುಕ್ಕೆ ಸುಬ್ರಹ್ಮಣ್ಯ, ಬೆಳ್ತಂಗಡಿ, ಮೂಡುಬಿದಿರೆ ಭಾಗದಲ್ಲಿ ಬಿಸಿಲಿನ ವಾತಾವರಣ ಇತ್ತು.

ಉಡುಪಿ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಬಿರುಸಿನ ಮಳೆ ಆಯಿತು. ಬ್ರಹ್ಮಾವರ ವ್ಯಾಪ್ತಿಯಲ್ಲಿ ಮಡಿಸಾಲು, ಸೀತಾ ನದಿ ಉಕ್ಕಿ ಹರಿದು ಗದ್ದೆಗಳು ಜಲಾವೃತವಾಗಿದ್ದವು.

ಮೀನುಗಾರರ ಶವ ಪತ್ತೆ: 

ಉಡುಪಿ ಜಿಲ್ಲೆ ಗಂಗೊಳ್ಳಿ ಅಳಿವೆ ಬಾಗಿಲಿನ ಹೊರ ಭಾಗದಲ್ಲಿ ಸಂಭವಿಸಿದ್ದ ನಾಡದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಮೃತದೇಹಗಳು ಪತ್ತೆಯಾಗಿವೆ.

ಕೊಡಗು: ಇಂದು ಶಿಕ್ಷಣ ಸಂಸ್ಥೆಗಳಿಗೆ ರಜೆ

ಮಡಿಕೇರಿ: ಕೊಡಗು ಜಿಲ್ಲೆಯ ಭಾಗಮಂಡಲ, ಸಂಪಾಜೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಭಾರಿ ಮಳೆ ಸುರಿಯಿತು. ಗುರುವಾರ ಆರೆಂಜ್ ಅಲರ್ಟ್ ಘೋಷಣೆ ಆಗಿದ್ದರೂ ಹೆಚ್ಚು ಮಳೆಯಾಗಲಿಲ್ಲ. 

ಹವಾಮಾನ ಇಲಾಖೆಯು ಶುಕ್ರವಾರ (ಜು.18) ರೆಡ್‌ ಅಲರ್ಟ್‌ ಘೋಷಿಸಿರುವ ಕಾರಣ ಮುಂಜಾಗ್ರತೆಯಾಗಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿದೆ. ಐಟಿಐ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ತಿಳಿಸಿದೆ.

ಕಬಿನಿಯಲ್ಲಿ ಪ್ರವಾಹ:

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಗುರುವಾರ ಸಂಜೆ ಹೊರಹರಿವಿನ ಪ್ರಮಾಣವು 13 ಸಾವಿರ ಕ್ಯುಸೆಕ್‌ನಿಂದ 25 ಸಾವಿರ ಕ್ಯುಸೆಕ್‌ಗೆ ಏರಿತ್ತು. ಇದರಿಂದ ಬಿದರಹಳ್ಳಿ ಸೇತುವೆಯು ಭಾಗಶಃ ಮುಳುಗಿದೆ.

ಉತ್ತರ ಕನ್ನಡ ಭಾರಿ ಮಳೆ, ಜಲಾವೃತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಗುರುವಾರ ನಸುಕಿನ ಜಾವದವರೆಗೆ ವ್ಯಾಪಕ ಮಳೆ ಸುರಿದಿದೆ. ಹಲವೆಡೆ ಜಲಾವೃತಗೊಂಡಿದ್ದು, ನಾಗರಿಕರಿಗೆ ಸಮಸ್ಯೆ ತಲೆದೋರಿದೆ. ಕಾರವಾರ, ಭಟ್ಕಳ, ಹೊನ್ನಾವರ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಮುಂಜಾಗ್ರತೆಯಾಗಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳ ವ್ಯಾಪ್ತಿಯ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಲೆನಾಡು ಭಾಗದಲ್ಲೂ ಆಗಾಗ ಬಿರುಸಿನ ಮಳೆ ಸುರಿಯಿತು.

ಮಳೆಗೆ ಗೋಡೆ ಕುಸಿದು ಬಾಲಕಿ ಸಾವು

ಗಂಗಾವತಿ (ಕೊಪ್ಪಳ ‌ಜಿಲ್ಲೆ):  ಎರಡ್ಮೂರು ದಿನಗಳಿಂದ ಸುರಿದ ಸಾಧಾರಣ ಮಳೆಗೆ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮನೆಯ ಶೀಟ್ ಮತ್ತು ಗೋಡೆ ಕುಸಿದು ಒಂದೂವರೆ ವರ್ಷದ ಬಾಲಕಿ ಪ್ರಶಾಂತಿ ಬುಧವಾರ ತಡರಾತ್ರಿ ಮೃತಪಟ್ಟಿದ್ದಾಳೆ.

ಘಟನೆಯಲ್ಲಿ ಬಾಲಕಿಯ ತಾಯಿ ಹನುಮಂತಿ, ಕುಟುಂಬದ ಸದಸ್ಯರಾದ ದುರ್ಗಮ್ಮ, ಭೀಮಮ್ಮ, ಹುಸೇನಪ್ಪ, ಫಕೀರಪ್ಪ ಗಾಯಗೊಂಡಿದ್ದಾರೆ. ಮಗಳೊಂದಿಗೆ ಹನುಮಂತಿ ತವರು ಮನೆಗೆ ಬಂದಾಗ ಈ ಘಟನೆ ನಡೆದಿದೆ.

ಕಳೆದ ತಿಂಗಳು ಜಿಲ್ಲೆಯಲ್ಲಿ ಮಳೆ ಕೊರತೆಯಾಗಿತ್ತು. ಕೊಪ್ಪಳ, ಗಂಗಾವತಿ, ಕುಕನೂರು ಹಾಗೂ ಕುಷ್ಟಗಿ ಭಾಗದಲ್ಲಿ ಗುರುವಾರ ಚೆನ್ನಾಗಿ ಮಳೆ ಸುರಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.