ಅರಣ್ಯ
(ಸಾಂಕೇತಿಕ ಚಿತ್ರ)
ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ಪಿಸಿಬಿ) ಅನುಮೋದನೆ ಇಲ್ಲದೆ, ಮಂಡಳಿಯ ಖಾತೆಯಿಂದ ₹426 ಕೋಟಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮಂಡಳಿ ಸಭೆ ತಡೆಯೊಡ್ಡಿದೆ.
ಅರಣ್ಯೀಕರಣ, ಆನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹300 ಕೋಟಿ ಹಾಗೂ ಕೆ–ಶೋರ್ ಯೋಜನೆಗೆ ₹126 ಕೋಟಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲು ಹಣಕಾಸು ಇಲಾಖೆ ಸಮ್ಮತಿಸಿತ್ತು. ಸೋಮವಾರ ನಡೆದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 248ನೇ ಸಭೆಯಲ್ಲಿ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬಾರದು’ ಎಂದು ಪಟ್ಟುಹಿಡಿದರು.
‘ಹಣ ವರ್ಗಾಯಿಸಬಾರದು’ ಎಂಬ ಸಭೆಯ ನಿರ್ಣಯವನ್ನು ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಿ, ಸಭೆಯನ್ನು ಮುಂದೂಡಲಾಯಿತು.
‘ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಣ ವರ್ಗಾವಣೆ ಮಾಡಲು ಕಾನೂನಿನಲ್ಲಿ ಹಲವು ರೀತಿಯ ತಾಂತ್ರಿಕ ತೊಂದರೆಗಳಿವೆ. ಹೀಗಾಗಿ, ಸರ್ಕಾರ ಹೊರಡಿಸಿರುವ ಆದೇಶಗಳಿಗೆ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿಲ್ಲ. ಈ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯವಾಗಿದೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಾರದಿಂದ ಅನುದಾನ ಪಡೆಯದ ಮಂಡಳಿ, ಎಲ್ಲ ವೆಚ್ಚಗಳನ್ನು ತನ್ನ ರಾಜಸ್ವದಿಂದಲೇ ಭರಿಸಬೇಕಾಗುತ್ತದೆ. ಹೊಸ ಸಿಬ್ಬಂದಿಗೂ ವೇತನ–ಭತ್ಯೆ ನೀಡಬೇಕಾಗುತ್ತದೆ. ಹೀಗಾಗಿ, ಅರಣ್ಯೀಕರಣ ಹಾಗೂ ಬ್ಯಾರಿಕೇಡ್ ಅಳವಡಿಸಲು ಹಣ ನೀಡಬಾರದು. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಮಂಡಳಿ ₹17 ಕೋಟಿ ನೀಡಿರುವುದಕ್ಕೆ ಮಹಾಲೇಖಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಗೆ ₹300 ಕೋಟಿ ನೀಡಿದರೂ ಆಕ್ಷೇಪ ವ್ಯಕ್ತವಾಗುವ ಸಂಭವವಿರುತ್ತದೆ’ ಎಂದು ಸೆಪ್ಟೆಂಬರ್ 9ರಂದು ನಡೆದ ಮಂಡಳಿಯ 247ನೇ ಸಭೆಯಲ್ಲೂ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮಂಡಳಿ ಸಭೆಯ ನಿರ್ಣಯ, ಹೂಡಿಕೆ ಸಮಿತಿ ನಡಾವಳಿ, ಸಾರ್ವಜನಿ ಕರ ಆಕ್ಷೇಪಗಳೊಂದಿಗೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಅಕ್ಟೋಬರ್ 9ರಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು.
ಮಂಡಳಿಯ ತಕರಾರುಗಳನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ‘ಹಣ ವರ್ಗಾವಣೆ ಮಾಡುವ ಬಗ್ಗೆ ಅರಣ್ಯ ಇಲಾಖೆಯೇ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು’ ಎಂದಿದ್ದರು. ಇದನ್ನು ಆಧರಿಸಿ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದರು.
‘ರಾಜ್ಯ ಮಾಲಿನ್ಯ ಮಂಡಳಿಯಿಂದ ₹200 ಕೋಟಿಯನ್ನು ನಾಲ್ಕು ವರ್ಷಗಳಿಗೆ ಶೇ 7.5ರಷ್ಟು ಸರಳ ಬಡ್ಡಿಯಂತೆ ಪಡೆದುಕೊಳ್ಳಬಹುದು. ಅರಣ್ಯ ಇಲಾಖೆ ಇನ್ನೂ ₹100 ಕೋಟಿಯನ್ನು ಪಡೆಯಲು ಬಯಸಿದರೆ ಅದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುದಾನವಾಗಿ ಪಡೆದು ಕೊಳ್ಳಬಹುದು’ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಯವರು ನವೆಂಬರ್ 27ರಂದು ಅನು ಮೋದನೆ (ಎಫ್ಡಿ/ 621/ಇಎಕ್ಸ್ಪಿ5/2024; ಎಫ್ಇಇ/ 427/ಇಪಿಸಿ/2024)ನೀಡಿದ್ದರು.
ಈ ಆದೇಶದಂತೆ ಹಣ ವರ್ಗಾವಣೆ ಬಗ್ಗೆ ಸೋಮವಾರ ನಡೆದ ಮಂಡಳಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಅನುಮೋದನೆ ನೀಡಲು ಸದಸ್ಯರು ನಿರಾಕರಿಸಿದರು.
₹300 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆ ಆದೇಶ
ಕೆ–ಶೋರ್ಗೆ ₹126 ಕೋಟಿ
‘ಕರಾವಳಿ ಕರ್ನಾಟಕದಲ್ಲಿ ಪ್ಲಾಸ್ಟಿಕ್ ನಿರ್ವಹಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ₹126 ಕೋಟಿಯನ್ನು ಬಡ್ಡಿರಹಿತ ಸಾಲವನ್ನಾಗಿ ಅರಣ್ಯ ಇಲಾಖೆ ಪಡೆದುಕೊಂಡು ಕೆ–ಶೋರ್ ಯೋಜನೆಗೆ ಬಳಸಿಕೊಳ್ಳಬಹುದು. ಇದಕ್ಕೆ ರಾಜ್ಯ ಹಣಕಾಸು ಇಲಾಖೆಯ ಸಮ್ಮತಿಯನ್ನು ಪಡೆಯಲಾಗಿದೆ’ ಎಂದು ಅರಣ್ಯ ಇಲಾಖೆಯ ಕಾರ್ಯದರ್ಶಿ ನವೆಂಬರ್ 26ರಂದು ಆದೇಶ (ಸರ್ಕಾರಿ ಆದೇಶ: ಎಫ್ಇಇ 41) ಹೊರಡಿಸಿದ್ದಾರೆ.
ಕೆ–ಶೋರ್ಗೆ ಹಣ ನೀಡುವ ವಿಷಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಅರಣ್ಯ ಪಡೆಯ ಮುಖ್ಯಸ್ಥರು, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಪ್ರಸ್ತಾವದಂತೆ ಅನುಮೋದನೆ ನೀಡಲಾಗಿತ್ತು. ಇದಕ್ಕೂ ಮಂಡಳಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಮಂಡಳಿಗೆ ಬಾಧಕ ಇಲ್ಲ: ಸಚಿವ ಈಶ್ವರ ಖಂಡ್ರೆ
‘ಮಾಲಿನ್ಯ ನಿಯಂತ್ರಣ ಮಂಡಳಿ ಯಿಂದ ₹300 ಕೋಟಿ ಪಡೆದು ಅರಣ್ಯ ಇಲಾಖೆಯ ವತಿಯಿಂದ ಅರಣ್ಯೀಕರಣ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸ ಲಾಗಿದೆ. ಇದರಿಂದ ಮಂಡಳಿಗೆ ಯಾವುದೇ ಬಾಧಕ ಇಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಹಣ ವರ್ಗಾವಣೆ ಕುರಿತು ‘ಪ್ರಜಾವಾಣಿ’ಯ ಪ್ರಶ್ನೆಗೆ ಪ್ರತಿಕ್ರಿಯಿಸಿ ರುವ ಅವರು, ‘ಇದು ಪರಿಸರ ಪೂರಕ ಚಟುವಟಿಕೆ ಆಗಿದ್ದು, ಮಂಡಳಿಯಲ್ಲಿ ಸಂಗ್ರಹವಾಗುವ ಹಣ ಪರಿಸರಪೂರಕ ಚಟುವಟಿಕೆಗೆ ಬಳಕೆ ಮಾಡಬೇಕು. ಅರಣ್ಯ ಇಲಾಖೆ ಮತ್ತು ಮಂಡಳಿಯ ಉದ್ದೇಶ ಒಂದೇ ಆಗಿದೆ. ಇದು ಒಂದು ಆಂತರಿಕ ಹೊಂದಾಣಿಕೆಯಷ್ಟೆ’ ಎಂದರು.
‘ಕೆ–ಶೋರ್ ವಿಶ್ವ ಬ್ಯಾಂಕ್ ಪ್ರಾಯೋಜಕತ್ವದ ಯೋಜನೆ, ಇದರಡಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಮುದ್ರ ಸೇರಿ ಜಲಚರಗಳ ಸಾವಿಗೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ನಿಗ್ರಹವಾಗಲಿದೆ. ಜೊತೆಗೆ ಕಡಲ ಕೊರೆತ ಆಗದಂತೆ ಕಾಂಡ್ಲಾ ವನ ಬೆಳೆಸಲೂ ಈ ಹಣ ಬಳಕೆಯಾಗುತ್ತದೆ. ₹126 ಕೋಟಿಯನ್ನು ರಾಜ್ಯ ಸರ್ಕಾರ ವೆಚ್ಚ ಮಾಡಬೇಕಾಗಿದ್ದು, ಮಂಡಳಿಯಿಂದ ಹಂತ ಹಂತವಾಗಿ ಹಣ ಪಡೆಯಲಾಗುತ್ತದೆ. ವಿಶ್ವ ಬ್ಯಾಂಕ್ ಈ ಹಣವನ್ನು ಮಂಡಳಿಗೆ ಮರು ಪಾವತಿ ಮಾಡುತ್ತದೆ’ ಎಂದಿದ್ದಾರೆ.
ಸಚಿವರ ಕಚೇರಿಗೆ ಟಿವಿ, ಫ್ರಿಜ್
ಅರಣ್ಯ ಸಚಿವರ ಆಪ್ತ ಶಾಖೆಯ ಕಚೇರಿಯ ನಿತ್ಯ ಬಳಕೆಗೆ ಕಂಪ್ಯೂಟರ್, ಟ್ಯಾಬ್, ಪ್ರಿಂಟರ್, ಟಿವಿ, ಯುಪಿಎಸ್, ಫ್ರಿಜ್ ಸೇರಿದಂತೆ 19 ವಿಧದ ಎಲೆಕ್ಟ್ರಾನಿಕ್ ಉಪಕರಣ– ಸಾಧನಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಹಣದಿಂದ ಪೂರೈಸಲಾಗಿದೆ.
ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅವರ ಟಿಪ್ಪಣಿ ಮೇರೆಗೆ ಮಂಡಳಿ ಸದಸ್ಯ ಕಾರ್ಯದರ್ಶಿ ಅವರು ಸುಮಾರು ₹72 ಲಕ್ಷ ಮೌಲ್ಯದ ಉಪಕರಣಗಳನ್ನು ಪೂರೈಸಲು ಅನುಮೋದನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.