ADVERTISEMENT

ಪಠ್ಯದಲ್ಲಿ ಲೋಪವಿದ್ದರೆ ಚರ್ಚಿಸಿ ಸರಿಪಡಿಸೋಣ, ವಿರೋಧ ರಾಜಕೀಯ ಸಲ್ಲ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 7:17 IST
Last Updated 6 ಜೂನ್ 2022, 7:17 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ನೂತನ ಪಠ್ಯಕ್ರಮದಲ್ಲಿ ಲೋಪಗಳಿದ್ದರೆ ಅದನ್ನು ಪುನರ್ ಪರಿಶೀಲನೆ ಮಾಡಲು ಅವಕಾಶ ಮಾಡಿಕೊಡಲಿ. ಅದನ್ನು ಬಿಟ್ಟು ವಿರೋಧ ಮಾಡುವ ರಾಜಕೀಯ ಸಲ್ಲ ಎಂದು ಸಾಹಿತಿಗಳಿಗೆ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬರಗೂರ ರಾಮಚಂದ್ರಪ್ಪ ಇದ್ದಾಗ ಅವರ ವಿಚಾರಕ್ಕೆ ತಕ್ಕಂತೆ ಪಠ್ಯಪುಸ್ತಕಗಳ ತಂದಿದ್ದರು. ಇವತ್ತು ಪರಿಷ್ಕರಣೆ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಪರಿಷ್ಕೃತ ಪಠ್ಯದಲ್ಲಿ ಯಾವುದಾದರೂ ಸರಿ ಇಲ್ಲ ಅನ್ನೋ ಅಂಶಗಳಿದ್ದರೆ ಪ್ರಾಮಾಣಿಕವಾಗಿ ಕುಳಿತು ಚರ್ಚಿಸಿ ತಿದ್ದಿಸುವ ಕೆಲಸ ಮಾಡಬೇಕು. ಆದರೆ ಇದರಲ್ಲಿ ರಾಜಕೀಯ, ವೈಚಾರಿಕ ಸಿದ್ಧಾಂತಗಳ ತಂದು ಇಡೀ ರಾಜ್ಯದಲ್ಲಿ ಗೊಂದಲ ಸೃಷ್ಟಿ ಮಾಡುವ ಕೆಲಸ ಕೆಲವು ಸಾಹಿತಿಗಳು ಮಾಡುತ್ತಿದ್ದಾರೆ ಎಂದರು.

'ಪಠ್ಯಕ್ರಮ ಸರಿ ಇಲ್ಲ ಎಂದು ಪತ್ರಿಕಾ ಹೇಳಿಕೆ ನೀಡುವುದು, ವಾಪಸ್ ಪಡೆಯುತ್ತೇವೆ ಎಂದು ಹೇಳುವುದು ಸರಿಯಲ್ಲ. ಎಷ್ಟರಮಟ್ಟಿಗೆ ಇದರಲ್ಲಿ ರಾಜಕಾರಣ ಇದೆ ಅಂದರೆ ಒಂಬತ್ತು ಜನ ತಮ್ಮ ಲೇಖನಗಳನ್ನು ಪಾಠದಲ್ಲಿ ಅಳವಡಿಸುವುದು ಬೇಡ ಎಂದು ಪತ್ರ ಬರೆದಿದ್ದಾರೆ. ಅದರಲ್ಲಿ ಏಳು ಜನರ ಪಾಠಗಳನ್ನು ಸಮಿತಿಯವರೇ ಕೈಬಿಟ್ಟಿದ್ದಾರೆ' ಎಂದರು.

'ನಮ್ಮ ದೇಶದ ಮಹಾಪುರುಷರು ಗ್ರೇಟ್ ಎಂಬುದನ್ನು ಓದುವುದು ಬಿಟ್ಟು ವಿದೇಶಿಯರಾದ ನೆಪೋಲಿಯನ್, ಮೊಘಲರು, ಗ್ರೇಟ್ ಎಂದು, ಮೈಸೂರು ಹುಲಿ ಟಿಪ್ಪು ಎಂದು ಮಕ್ಕಳು ಓದುತ್ತಿದ್ದರು. ಅದನ್ನು ಈಗ ಸರಿಪಡಿಸಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.