ADVERTISEMENT

ವಿಧಾನ ಪರಿಷತ್ ಚುನಾವಣೆ | ಹಣದ್ದೇ ಮಾತು; ಈ ಬಾರಿ ಎಷ್ಟಂತೆ? ₹15 ಕೋಟಿ ಬೇಕಂತೆ!

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ

ಕೆ.ಓಂಕಾರ ಮೂರ್ತಿ
Published 26 ನವೆಂಬರ್ 2021, 20:15 IST
Last Updated 26 ನವೆಂಬರ್ 2021, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಗೆ ‘ಕೋಟ್ಯಧಿಪತಿ’ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಂತೆ ‘ಈ ಬಾರಿ ರೇಟು ಎಷ್ಟಂತೆ? ಒಬ್ಬೊಬ್ಬರು ₹15 ಕೋಟಿಗೂ ಅಧಿಕ ಖರ್ಚು ಮಾಡ್ತರಂತೆ’ ಎಂಬ ಮಾತು ಗ್ರಾಮ ಪಂಚಾಯಿತಿ ಪಡಸಾಲೆಗಳಲ್ಲಿ ಕೇಳಿ ಬರುತ್ತಿದೆ.

ಈ ಬಾರಿ ಕಣಕ್ಕಿಳಿದಿರುವ ಕಾಂಗ್ರೆಸ್‌ನ ಡಾ.ಡಿ.ತಿಮ್ಮಯ್ಯ, ಬಿಜೆಪಿಯ ಆರ್‌.ರಘು (ಕೌಟಿಲ್ಯ) ಹಾಗೂ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ಈಗಾಗಲೇ ಪ್ರಚಾರ ಆರಂಭಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಭೆ ಆಯೋಜನೆ, ವ್ಯಕ್ತಿಗತ ಭೇಟಿ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

‘ಹೋದ ಸಲ ಒಂದು ವೋಟಿನ ರೇಟು ₹ 20 ಸಾವಿರದಿಂದ 25 ಸಾವಿರ ಇತ್ತು. ಈ ಬಾರಿಯೂ ಘಟಾನುಘಟಿಗಳೇ ಸ್ಪರ್ಧಿಸಿದ್ದು, ₹30 ಸಾವಿರ ರಿಂದ 50 ಸಾವಿರದವರೆಗೆ ಏರಬಹುದು’ ಎಂದು ಮೂರೂ ಪಕ್ಷದ ಸಭೆಗಳಲ್ಲಿ ಮುಖಂಡರು, ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ADVERTISEMENT

‘ಈ ಚುನಾವಣೆಯಲ್ಲಿ ಖರ್ಚಿಗೆ ಪಕ್ಷದಿಂದ ಅಭ್ಯರ್ಥಿಗೆ ಹಣ ಕೊಡುವುದಿಲ್ಲ. ಏಕೆಂದರೆ ಚುನಾವಣೆಯಿಂದ ಪಕ್ಷಕ್ಕೆ ಲಾಭವಿಲ್ಲ. ಪ್ರತಿಷ್ಠೆ ಹಾಗೂ ಸಂಖ್ಯೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ‍ಆರ್ಥಿಕವಾಗಿ ಪ್ರಬಲರಾಗಿರುವವರನ್ನೇ ಕಣಕ್ಕಿಳಿಸುತ್ತಾರೆ. 25 ಸ್ಥಾನಗಳಿಗೆ ನಡೆಯಲಿರುವ ಈ ಚುನಾವಣೆಯಲ್ಲಿ ಕನಿಷ್ಠ ₹1 ಸಾವಿರ ಕೋಟಿ ಹರಿದಾಡಲಿದೆ’‌ ಎಂದು ಬಿಜೆಪಿ ರಾಜ್ಯಮಟ್ಟದ ನಾಯಕರೊಬ್ಬರು ತಿಳಿಸಿದರು.

ಇತ್ತ ಇಷ್ಟು ದಿನ ಪಕ್ಷಗಳ ಜೊತೆ ಗುರುತಿಸಿಕೊಳ್ಳುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯರು ‘ನಾನು ತಟಸ್ಥ’ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕೆಲವರು ಮೂರೂ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.

ಏಜೆಂಟ್‌ ನೇಮಕ: ಮೈಸೂರು ಹಾಗೂ ಚಾಮರಾಜನಗರ ಸೇರಿ 380 ಗ್ರಾಮ ಪಂಚಾಯಿತಿಗಳಿದ್ದು, ಅಭ್ಯರ್ಥಿಗಳು ಪ್ರತಿ ಪಂಚಾಯಿತಿಗೊಬ್ಬ ಏಜೆಂಟ್‌ ನೇಮಿಸುತ್ತಿದ್ದಾರೆ. ‘ಅವರ ಮೂಲಕವೇ ಉಡುಗೊರೆಯ ವಿತರಣೆ ನಡೆಯಲಿದೆ’ ಎನ್ನಲಾಗಿದೆ.

ವಿಶೇಷವೆಂದರೆ ಅಭ್ಯರ್ಥಿಗಳು ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕದೆ ಬಾಂಧವರು, ಪರಿಚಯಸ್ಥರು, ನಂಬಿಕಸ್ಥರು ಹಾಗೂ ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನೇ ಈ ಉದ್ದೇಶಕ್ಕೆ ನಿಯೋಜಿಸುತ್ತಿದ್ದಾರೆ.

ಬಿಡಿಗಾಸಿಗೆ ಕೈಯೊಡ್ಡಲ್ಲ: ‘ಆರು ವರ್ಷಗಳ ಅವಧಿಯಲ್ಲಿ ಒಮ್ಮೆಯಾದರೂ ಗ್ರಾಮಕ್ಕೆಬಂದು ಅಭಿವೃದ್ಧಿ ಕೆಲಸ ಮಾಡಿಕೊಟ್ಟರೆ ಸಾಕು. ಹಿಂದೆ ಯಾರೂ ಭೇಟಿಯೇ ಕೊಟ್ಟಿಲ್ಲ. ಅಭ್ಯರ್ಥಿಗಳು ನೀಡುವ ಬಿಡಿಗಾಸಿಗೆ ಕೈಯೊಡ್ಡುವವರುನಾವಲ್ಲ’‌ ಎಂದು ಹುಣಸೂರುತಾಲ್ಲೂಕು ಚಿಲ್ಕುಂದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಣ್ಣ ಹೇಳಿದರು.

‘ಚುನಾವಣೆಯಲ್ಲಿ ಹಣದ ಶಕ್ತಿ’

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲ್ಲುವವರು ಸೋಲುತ್ತಾರೆ, ಸೋಲುವವರು ಗೆಲ್ಲುತ್ತಾರೆ. ಹಣ ಸೇರಿದಂತೆ ಹಲವು ಶಕ್ತಿಗಳು ಕೆಲಸ ಮಾಡುತ್ತವೆ. ಗುಪ್ತವಾಗಿ ಏನೇನು ನಡೆಯುತ್ತದೆ ಎಂಬುದು ಗೊತ್ತಾಗುವುದಿಲ್ಲ. ಜನರೇ ಈ ವಿಚಾರವಾಗಿ ಧ್ವನಿ ಎತ್ತಬೇಕು’ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

****

ತಲೆಗಿಷ್ಟು ಎಂದು ಹಣ ನಿಗದಿ ಮಾಡಿದರೆ ಸದಸ್ಯರನ್ನು ಅವಮಾನ ಮಾಡಿದಂತೆ. ದುರ್ಬಳಕೆ ಮಾಡಿಕೊಂಡ ಪಕ್ಷಗಳು ಹಣದ ಬಗ್ಗೆ ಮಾತನಾಡುತ್ತವೆ

-ಆರ್‌.ರಘು,‌ ಬಿಜೆಪಿ ಅಭ್ಯರ್ಥಿ

****

ಮೊದಲ ಬಾರಿ ಸ್ಪರ್ಧಿಸುತ್ತಿದ್ದು, ಹಣದ ಪ್ರಭಾವ ಗೊತ್ತಿಲ್ಲ. ಕಾಂಗ್ರೆಸ್‌ ಬೆಂಬಲಿತ ಗ್ರಾ.ಪಂ ಸದಸ್ಯರು ಹೆಚ್ಚಿರುವುದರಿಂದ ಹಣ ಖರ್ಚು ಮಾಡಬೇಕಿಲ್ಲ

-ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್‌ ಅಭ್ಯರ್ಥಿ


****

ಮೊದಲ ಬಾರಿ ಸ್ಪರ್ಧಿಸುತ್ತಿದ್ದು, ಹಣದ ಪ್ರಭಾವ ಗೊತ್ತಿಲ್ಲ. ಕಾಂಗ್ರೆಸ್‌ ಬೆಂಬಲಿತ ಗ್ರಾ.ಪಂ ಸದಸ್ಯರು ಹೆಚ್ಚಿರುವುದರಿಂದ ಹಣ ಖರ್ಚು ಮಾಡಬೇಕಿಲ್ಲ

-ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.