ADVERTISEMENT

ಬಹಿರಂಗವಾಗಿ ಕಿತ್ತಾಟ: ರೂಪಾ, ರೋಹಿಣಿ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:15 IST
Last Updated 21 ಫೆಬ್ರುವರಿ 2023, 22:15 IST
   

ಬೆಂಗಳೂರು: ಸಾಮಾಜಿಕ ಮಾಧ್ಯಮಗಳು ಹಾಗೂ ಮಾಧ್ಯಮಗಳ ಮೂಲಕ ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದ ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಯಾವುದೇ ಹುದ್ದೆ ತೋರಿಸದೇ ಮಂಗಳವಾರ ವರ್ಗಾವಣೆ ಮಾಡಲಾಗಿದೆ.

ರೂಪಾ ಅವರ ಪತಿ ಮುನೀಶ್‌ ಮೌದ್ಗಿಲ್‌ ಅವರನ್ನೂ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಸುಧಾರಣಾ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ಶ್ರೀವತ್ಸ ಕೃಷ್ಣ ಅವರನ್ನು ವರ್ಗಾವಣೆ ಮಾಡಲಾಗಿದೆ.

ರೂಪಾ ಅವರು ರೋಹಿಣಿ ವಿರುದ್ಧ ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ ಮಾಡಿದ್ದರು. ಬಳಿಕ ಇಬ್ಬರ ನಡುವೆ ಕಿತ್ತಾಟ ಜೋರಾಗಿತ್ತು. ಮುನೀಶ್‌ ಮೌದ್ಗಿಲ್‌ ಅವರ ಹೆಸರನ್ನೂ ರೂಪಾ ಆರೋಪಗಳಲ್ಲಿ ಉಲ್ಲೇಖಿಸಿದ್ದರು. ಬಹಿರಂಗ ಹೇಳಿಕೆ ನೀಡದಂತೆ ಮುಖ್ಯ ಕಾರ್ಯದರ್ಶಿ ಇಬ್ಬರಿಗೂ ಸೋಮವಾರ ತಾಕೀತು ಮಾಡಿದ್ದರು.

ADVERTISEMENT

ಅಧಿಕಾರಿಗಳ ಕಿತ್ತಾಟದ ಕುರಿತು ಸೋಮವಾರ ನಡೆದ ಸಂಪುಟ ಸಭೆಯಲ್ಲೂ ಚರ್ಚೆಯಾಗಿತ್ತು. ವರ್ಗಾವಣೆ ಸೇರಿದಂತೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೆಲವು ಸಚಿವರು ಸಲಹೆ ನೀಡಿದ್ದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಂಟಿ ಕಾರ್ಯದರ್ಶಿ ಹುದ್ದೆಯಲಿದ್ದ ಎಚ್‌. ಬಸವ
ರಾಜೇಂದ್ರ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ಹುದ್ದೆಯಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಹೆಚ್ಚುವರಿ ನಿರ್ದೇಶಕ ಸಿ.ಎನ್‌. ಶ್ರೀಧರ ಅವರನ್ನು ಇದೇ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಐಎಎಸ್‌ ಅಧಿಕಾರಿ ಭಾರತಿ ಡಿ. ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ಹುದ್ದೆಗೆ ನೇಮಿಸಲಾಗಿದೆ. ಡಿ. ರೂಪಾ ಈ ಹುದ್ದೆಯಲ್ಲಿದ್ದರು.

ಬಹಿರಂಗ ಸಮರ ಬಂದ್‌

ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಮಂಗಳವಾರದಿಂದ ಬಹಿರಂಗ ಸಮರ ಸ್ಥಗಿತಗೊಳಿಸಿದ್ದಾರೆ. ಇಬ್ಬರೂ ಸಾಮಾಜಿಕ ಮಾಧ್ಯಮ ಅಥವಾ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ, ಅಭಿಪ್ರಾಯ ಹಂಚಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.