ADVERTISEMENT

ಕಾವೇರಿ ತಂತ್ರಾಂಶ: ಪರಿಷ್ಕರಣೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 15:51 IST
Last Updated 27 ನವೆಂಬರ್ 2025, 15:51 IST
   

ಬೆಂಗಳೂರು: ‘ಚಾಲ್ತಿಯಲ್ಲಿರುವ ಕಾವೇರಿ 2.0 ತಂತ್ರಾಂಶದ ಕಾನೂನಿನಲ್ಲಿ, ‘ಮ್ಯುಟೇಷನ್‌ ಆಧಾರಿತ ಸಿವಿಲ್‌ ಕೋರ್ಟ್‌ ಡಿಕ್ರಿ’ ಎಂಬ ಹೊಸ ಕಾರ್ಯ ನಿರ್ವಹಣಾ ಶೀರ್ಷಿಕೆಯನ್ನೂ ಸೇರ್ಪಡೆ ಮಾಡಿ ಪರಿಷ್ಕರಿಸಬೇಕು’ ಎಂದು ಹೈಕೋರ್ಟ್‌, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕಂದಾಯ ಇಲಾಖೆಗೆ ನಿರ್ದೇಶಿಸಿದೆ.

‘ಸಿವಿಲ್ ವ್ಯಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಅಂಗೀಕರಿಸಿದ ರಾಜಿ ಡಿಕ್ರಿಯ ಅನುಸಾರ ನಮ್ಮ ಹೆಸರಿಗೆ ಖಾತಾ ವರ್ಗಾವಣೆ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಗಿಲ್ಬರ್ಟ್‌ ವಾಝ್‌ ಸೇರಿದಂತೆ ಐವರು ಸಲ್ಲಿಸಿದ್ದ ರಿಟ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಸದ್ಯ ಕಾವೇರಿ 2.0 ಮಾರಾಟ, ಗಿಫ್ಟ್‌ ಡೀಡ್‌, ಅಡಮಾನ, ಪಿತ್ರಾರ್ಜಿತ ಆಸ್ತಿ ಕುರಿತ ಚಟುವಟಿಕೆಗಳನ್ನು ಆಧರಿಸಿದೆ ಮತ್ತು ಇದರಲ್ಲಿ ಆಸ್ತಿ ವಿವಾದಗಳ ಕುರಿತಂತೆ ಸಿವಿಲ್‌ ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ. ಇದರಿಂದಾಗಿ ನಾಗರಿಕರು, ನ್ಯಾಯಾಲಯಗಳು ನಿರ್ಣಾಯಕವಾಗಿ ನಿರ್ಧರಿಸಿದ ವಿಷಯಗಳಿಗೆ ಹಲವು ಅನುಮೋದನೆಗಳು, ಪರಿಶೀಲನೆಗಳು ಮತ್ತು ಪ್ರಮಾಣೀಕರಣಗಳನ್ನು ಪಡೆಯಬೇಕೆಂದು ಸೂಚಿಸುತ್ತದೆ. ಹಾಗಾಗಿ, ಹಾಲಿ ತಂತ್ರಾಂಶದಲ್ಲಿ ಗೊಂದಲ ಉಂಟು ಮಾಡುತ್ತಿರುವ ಕಾರಣ ಪರಿಷ್ಕರಣೆ ಅತ್ಯಗತ್ಯವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ಕೋರ್ಟ್‌ ತೀರ್ಪುಗಳು ಮತ್ತು ಆಡಳಿತಾತ್ಮಕ ನಿರ್ಣಯಗಳನ್ನು ಜಾರಿಗೊಳಿಸುವ ಮಧ್ಯೆ ಸಮನ್ವಯ ಸ್ಥಾಪಿಸಲು ಮತ್ತು ಸಿವಿಲ್‌ ನ್ಯಾಯಾಲಯದ ತೀರ್ಪುಗಳು ರಾಜ್ಯದ ಡಿಜಿಟಲ್‌ ಆದಾಯ ಮೂಲಸೌಕರ್ಯದಲ್ಲಿ ಸ್ವಯಂಚಾಲಿತವಾಗಿ ಮನ್ನಣೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ  ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ (ಸಿಎಸ್‌ಜಿ) ಸಹಯೋಗದೊಂದಿಗೆ ಕಾನೂನಿನ ಪರಿಷ್ಕರಣೆ ಮಾಡಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.