
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಯುವ ಸಿಇಟಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿನ ಲೋಪಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮಾರ್ಚ್ 30ರವರೆಗೆ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಫೆ.27ರವರೆಗೆ ಅವಕಾಶ ಇದೆ. ಶುಲ್ಕ ಪಾವತಿಗೆ ಮಾರ್ಚ್ 3 ಕೊನೆಯ ದಿನ. ಈ ನಿಗದಿತ ಅವಧಿಯ ಒಳಗೆ ಅರ್ಜಿ ಸಲ್ಲಿಸಿದವರು ತಿದ್ದುಪಡಿ ಮಾಡಿಕೊಳ್ಳಬಹುದು. ಆದರೆ, ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ ಇರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ.
ಒಳಮೀಸಲಾತಿಗೆ ಆರ್ಡಿ ಕಡ್ಡಾಯ: ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಆರ್ಡಿ ಸಂಖ್ಯೆ ಇರುವ ಪ್ರವರ್ಗ-ಎ, ಬಿ ಮತ್ತು ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರವನ್ನು ತಹಶೀಲ್ದಾರರಿಂದ ಪಡೆದು ಅರ್ಜಿಯ ಪೋರ್ಟಲ್ನಲ್ಲಿ ಆರ್ಡಿ ಸಂಖ್ಯೆಯನ್ನು ದಾಖಲಿಸಬೇಕು. ಈ ತಿದ್ದುಪಡಿಗೂ ಮಾರ್ಚ್ 30ರವರೆಗೆ ಸಮಯ ನೀಡಲಾಗಿದೆ
ಪರಿಶಿಷ್ಟ ಜಾತಿಯ 40 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 20 ಸಾವಿರ ಅಭ್ಯರ್ಥಿಗಳು ಮಾತ್ರ ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳ ಆರ್ಡಿ ಸಂಖ್ಯೆಯನ್ನು ದಾಖಲಿಸಿದ್ದಾರೆ. ಉಳಿದವರು ಪರಿಶಿಷ್ಟ ಜಾತಿ ಎಂದು ನಮೂದಾಗಿರುವ ಆರ್ಡಿ ಸಂಖ್ಯೆ ನಮೂದಿಸಿದ್ದಾರೆ. ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ಪಡೆಯದವರು ತಕ್ಷಣ ತಹಶೀಲ್ದಾರ್ ಅವರಿಂದ ಪಡೆದು, ಹೊಸ ಸಂಖ್ಯೆಯನ್ನು ದಾಖಲಿಸಬೇಕು ಎಂದು ಪ್ರಾಧಿಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.