ಸಿಇಟಿ ಪ್ರಕ್ರಿಯೆಗಳನ್ನು ಮೊಬೈಲ್ನಲ್ಲೇ ನಿರ್ವಹಿಸುವ ‘ಕೆಇಎ ಮೊಬೈಲ್ ಆ್ಯಪ್’ ಅನ್ನು ಸಚಿವ ಎಂ.ಸಿ. ಸುಧಾಕರ್ ಸೋಮವಾರ ಬಿಡುಗಡೆ ಮಾಡಿದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಉಪಸ್ಥಿತರಿದ್ದರು.
ಬೆಂಗಳೂರು: ಸಿಇಟಿ ಮೂಲಕ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಶಿಕ್ಷಣ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಯನ್ನು ಅತ್ಯಂತ ಸುಲಭ ಹಾಗೂ ತ್ವರಿತಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ವಿದ್ಯಾರ್ಥಿಗಳು ತಾವು ಪಡೆದ ರ್ಯಾಂಕಿಂಗ್ಗೆ ಅನುಗುಣವಾಗಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಕೆಇಎ ಕಾಲೇಜು ಪೋರ್ಟಲ್ಗೆ ಭೇಟಿ ನೀಡಿದರೆ ಆಯಾ ಕಾಲೇಜುಗಳ ಚಿತ್ರಸಹಿತ ಸಂಪೂರ್ಣ ಮಾಹಿತಿ ಸಿಗಲಿದೆ.
‘ಕೆಇಎ ಮೊಬೈಲ್ ಆ್ಯಪ್’ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡರೆ ಸಿಇಟಿ ಅರ್ಜಿ ಸಲ್ಲಿಕೆಯಿಂದ ಕಾಲೇಜುಗಳ ಆಯ್ಕೆ, ಪ್ರವೇಶದವರೆಗೂ ಅಂಗೈನಲ್ಲಿರುವ ಮೊಬೈಲ್ನಲ್ಲೇ ನಿರ್ವಹಣೆ ಮಾಡಬಹುದು. ‘ಚಾಟ್ ಬಾಟ್’ ಬಳಸಿಕೊಂಡು ತಮ್ಮ ಪ್ರಶ್ನೆ, ಅನುಮಾನಗಳಿಗೆ ನೇರ ಉತ್ತರ ಪಡೆಯಬಹುದು. ಇದರಿಂದ ನಿಖರ ಮಾಹಿತಿ ಸಿಕ್ಕು, ಅನಗತ್ಯ ಗೊಂದಲಕ್ಕೆ ತೆರೆ ಬಿದ್ದು, ಮಧ್ಯವರ್ತಿಗಳ ಹಾವಳಿ ತಡೆಗೂ ಸಹಕಾರಿಯಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರೂಪಿಸಿರುವ ಈ ವಿದ್ಯಾರ್ಥಿಸ್ನೇಹಿ ಉಪಕ್ರಮಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸೋಮವಾರ ಚಾಲನೆ ನೀಡಿದರು.
ಕಾಲೇಜು ಪೋರ್ಟಲ್: ಅಭ್ಯರ್ಥಿಗಳು ಕಾಲೇಜುಗಳ ಆಯ್ಕೆಗೆ ಆಪ್ಷನ್ ದಾಖಲಿಸುವ ಮುನ್ನ ಆಯಾ ಕಾಲೇಜುಗಳ ಸಂಪೂರ್ಣ ಮಾಹಿತಿ ಕಾಲೇಜು ಪೋರ್ಟಲ್ನಲ್ಲಿ ಲಭ್ಯವಾಗುತ್ತದೆ. ಕಾಲೇಜುಗಳ ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಪ್ರಯೋಗಾಲಯ, ಗ್ರಂಥಾಲಯ, ಕೊಠಡಿ, ಹಾಸ್ಟೆಲ್, ಕೋರ್ಸ್ವಾರು ಶುಲ್ಕದ ವಿವರ, ಅಧ್ಯಾಪಕ ವರ್ಗ ಸೇರಿದಂತೆ ಪೂರ್ಣ ವಿವರಗಳನ್ನು ವೀಕ್ಷಿಸಬಹುದು.
ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ ವಿದ್ಯಾರ್ಥಿಗಳು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿಗೆ ತೆರಳಿದಾಗ ಮೂಲಸೌಕರ್ಯ, ಸಮರ್ಪಕ ಅಧ್ಯಾಪಕ ವರ್ಗ ಇಲ್ಲದೇ ಇರುವುದು, ಕಾಲೇಜುಗಳ ಸ್ಥಳ ಬದಲಾವಣೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇಂತಹ ಯಾವುದೇ ಗೊಂದಲಗಳಿಗೆ ಇನ್ನು ಮುಂದೆ ಅವಕಾಶ ಇರುವುದಿಲ್ಲ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.
ಕೆಇಎ ಮೊಬೈಲ್ ಆ್ಯಪ್: ಕೆಇಎ ವೆಬ್ಸೈಟ್ನಲ್ಲಿ ಲಭ್ಯವಾಗುವ ಎಲ್ಲ ಮಾಹಿತಿಯನ್ನೂ ‘ಕೆಇಎ ಮೊಬೈಲ್ ಆ್ಯಪ್’ ಒಳಗೊಂಡಿರುತ್ತದೆ. ಆ್ಯಪ್ ಮೂಲಕವೇ ಅರ್ಜಿ ಹಾಕುವುದು, ಆಪ್ಷನ್ ದಾಖಲಿಸುವುದು, ಛಾಯ್ಸ್, ಶುಲ್ಕ ಪಾವತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಮಾಡಬಹುದು. ವಿದ್ಯಾರ್ಥಿಗಳ ಪ್ರವೇಶವನ್ನೂ ಆಯಾ ಕಾಲೇಜುಗಳು ಅಂದೇ ಖಚಿತಪಡಿಸುತ್ತವೆ. ಇದರಿಂದ ಮುಂದಿನ ಸುತ್ತಿನ ಸೀಟು ಹಂಚಿಕೆಗೂ ವೇಗ ದೊರೆಯಲಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡವರಿಗೆ ಸಂದೇಶ ಕಳುಹಿಸುವ ವ್ಯವಸ್ಥೆ ಕೂಡ ಇರುತ್ತದೆ. ಗ್ರಾಮೀಣ ಭಾಗ ವಿದ್ಯಾರ್ಥಿಗಳಿಗೆ ಸಿಇಟಿ ಅರ್ಜಿ ಭರ್ತಿ ಮಾಡಲು, ಸೀಟು ಹಂಚಿಕೆಗೆ ಸೈಬರ್ ಸೆಂಟರ್ಗಳ ಮೇಲಿನ ಅವಲಂಬನೆ ಇರುವುದಿಲ್ಲ.
ಕೆಇಎ ಚಾಟ್ ಬಾಟ್: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನ ಚಾಟ್ ಬಾಟ್ ವ್ಯವಸ್ಥೆ ಬಳಸಿ ಅಭ್ಯರ್ಥಿಗಳು ಪ್ರಶ್ನೆ, ಅನುಮಾನಗಳಿಗೆ ನೇರವಾಗಿ ಉತ್ತರ ಪಡೆಯಬಹುದು. ಕೆಇಎ ಪ್ರಕಟಿಸುವ ಎಲ್ಲ ಮಾಹಿತಿಯನ್ನೂ ಅಪ್ಲೋಡ್ ಮಾಡಲಾಗುತ್ತದೆ. ಪ್ರಾಯೋಗಿಕವಾಗಿ ಆರಂಭಿಸಿದ ನಂತರ 1.35 ಲಕ್ಷ ಅಭ್ಯರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಸದ್ಯ ಹೊಸ ವ್ಯವಸ್ಥೆ ಇಂಗ್ಲಿಷ್ನಲ್ಲಿ ಮಾತ್ರ ಉತ್ತರ ನೀಡುತ್ತಿದೆ. ತಿಂಗಳ ಒಳಗೆ ಕನ್ನಡದಲ್ಲೂ ಮಾಹಿತಿ ಸಿಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದರು.
ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ನೇರವಾಗಿ ಶುಲ್ಕ ನಿಯಂತ್ರಣ ಸಮಿತಿಗೆ ದೂರು ದಾಖಲಿಸುವುದಕ್ಕೂ ಇದೇ ಪೋರ್ಟಲ್ನಲ್ಲಿ ಲಿಂಕ್ ನೀಡುವ ಕೆಲಸ ನಡೆಯುತ್ತಿದೆ.–ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಕೌಶಲ ಶುಲ್ಕ ಪರಿಷ್ಕರಣೆ
ಎಂಜಿನಿಯರಿಂಗ್ ಕಾಲೇಜುಗಳು ನೀಡುವ ವಿವಿಧ ರೀತಿಯ ಕೌಶಲ ಆಧಾರಿತ ತರಬೇತಿಗೆ ನಿಗದಿತ ಶುಲ್ಕಕ್ಕಿಂತ ಗರಿಷ್ಠ ₹20 ಸಾವಿರದವರೆಗೆ ಹೆಚ್ಚುವರಿ ಶುಲ್ಕ ಪಡೆಯಲು ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅವಕಾಶ ಕಲ್ಪಿಸಿದೆ. ಈ ವರ್ಷವೂ ಅವಕಾಶ ನೀಡಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು. ಪ್ರತಿ ಕಾಲೇಜಿನಲ್ಲೂ ತಪಾಸಣೆ ನಡೆಸಿದ ನಂತರ ಮುಂದಿನ ವರ್ಷ ಕೌಶಲ ತರಬೇತಿ ಶುಲ್ಕ ಪರಿಷ್ಕರಣೆ ಮಾಡಲಾಗುವುದು ಎಂದರು. ಕ್ಯಾಂಪಸ್ ಆಯ್ಕೆಗೂ ಕೆಲ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ದೂರುಗಳು ಬಂದಿವೆ. ಅಂತಹ ಕಾಲೇಜುಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಇಟಿ ಬಳಿಕ ಕಾಮೆಡ್-ಕೆ ಸೀಟು ಹಂಚಿಕೆ
ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ನಂತರವೇ ಕಾಮೆಡ್-ಕೆ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಸಲಹೆಯನ್ನು ಕಾಮೆಡ್-ಕೆ ಒಪ್ಪಿಕೊಂಡಿದೆ ಎಂದು ಸುಧಾಕರ್ ಹೇಳಿದರು. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿಯುವ ಕೆಲ ಕೋರ್ಸ್ಗಳ ಆಡಳಿತ ಮಂಡಳಿ ಕೋಟಾದ ಸಿಇಟಿ ಮೂಲಕ ಭರ್ತಿ ಮಾಡುವ ಚಿಂತನೆ ನಡೆದಿದೆ ಎಂದರು.
ಎಸ್ಇಪಿ ಜಾರಿಗೆ ಅಂತಿಮ ಸಿದ್ಧತೆ
ರಾಜ್ಯ ಶಿಕ್ಷಣ ನೀತಿ ವರದಿ ಸಿದ್ಧವಾಗಿದ್ದು 2025–26ನೇ ಸಾಲಿನಿಂದಲೇ ಜಾರಿಗೊಳಿಸಲು ಚರ್ಚೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು. ಆಯೋಗ ಅಂತಿಮ ವರದಿಯನ್ನು ಈಗಾಗಲೇ ಸಿದ್ಧಪಡಿಸಿದೆ. ಕನ್ನಡ ಅನುವಾದವೂ ಮುಕ್ತಾಯದ ಹಂತಕ್ಕೆ ಬಂದಿದೆ. ಮೇ 25ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.